ಪದ್ಯ ೮: ಮಾನವ ಹೇಗೆ ಭಗವಂತನಾಗುತ್ತಾನೆ?

ಸೃಷ್ಟಿ ಸಂಹಾರದಲಿ ಭೂತದ
ಕಟ್ಟಲೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲ ಕರ್ಮವ
ಮೆಟ್ಟಿನಿಲೆ ಭಗವಂತನೆನಿಸುವೆ ರಾಯ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಪ್ರಕೃತಿಯ ಹುಟ್ಟು ಮತ್ತು ನಾಶಗಳಲ್ಲಿ, ಪಂಚಭೂತಗಳು ಬಂದು ಹೋಗುವುದರಲ್ಲಿ, ವಿದ್ಯೆ ಮತ್ತು ಅವಿದ್ಯೆಯಲ್ಲಿ ಒಂದೇ ಆಗಿದ್ದು ನಷ್ಟ ಲಾಭಗಳಲ್ಲಿ ಮನಸ್ಸನ್ನು ಕದಲಿಸದೆ ಕಾಲ ಕರ್ಮಗಳನ್ನು ಮೆಟ್ಟಿ ನಿಂತರೆ ಆಗ ನೀನು ಭಗವಂತನಾಗುವೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಸೃಷ್ಟಿ: ಪ್ರಕೃತಿ, ಜಗತ್ತು; ಸಂಹಾರ:ನಾಶ, ಕೊನೆ; ಭೂತ: ಚರಾಚರಾತ್ಮಕ ಜೀವರಾಶಿ; ಕಟ್ಟಳೆ: ಅನೂಚಾನವಾಗಿ ಅನುಸರಿಸಿಕೊಂಡು ಬಂದ ನಿಯಮ; ಗತಾಗತಿ: ಹೋಗುವುದು ಬರುವುದು; ಮುಟ್ಟು: ತಾಕು; ವಿದ್ಯೆ: ಜ್ಞಾನ; ಅವಿದ್ಯೆ: ಅಜ್ಞಾನ; ಅಪ್ರತಿಮ: ಎಣೆಯಿಲ್ಲದ, ಸಮಾನವಿಲ್ಲದ; ನಷ್ಟ: ಹಾನಿ, ಕೆಡುಕು; ತುಷ್ಟಿ: ಲಾಭ; ಮನ: ಮನಸ್ಸು; ಬಿಟ್ಟು: ಬಿಡುಗಡೆ; ಹಿಡಿ: ಬಂಧನ; ಕಾಲ: ಸಮಯ; ಕರ್ಮ: ಕೆಲಸ; ಮೆಟ್ಟು: ತುಳಿ; ನಿಲೆ: ನಿಂತರೆ; ಭಗವಂತ: ದೈವ; ರಾಯ: ಅರಸು;

ಪದವಿಂಗಡಣೆ:
ಸೃಷ್ಟಿ +ಸಂಹಾರದಲಿ +ಭೂತದ
ಕಟ್ಟಲೆಗಳ +ಗತಾಗತಿಗಳಲಿ
ಮುಟ್ಟಿಸಿದ +ವಿದ್ಯೆಯಲ್+ಅವಿದ್ಯೆಯಲ್+ಅಪ್ರತಿಮನೆನಿಸಿ
ನಷ್ಟಿಯಲಿ +ತುಷ್ಟಿಯಲಿ +ಮನವನು
ಬಿಟ್ಟು +ಹಿಡಿಯದೆ +ಕಾಲ +ಕರ್ಮವ
ಮೆಟ್ಟಿನಿಲೆ +ಭಗವಂತನ್+ಎನಿಸುವೆ +ರಾಯ +ಕೇಳೆಂದ

ಅಚ್ಚರಿ:
(೧) ಸೃಷ್ಟಿ, ನಷ್ಟಿ, ತುಷ್ಟಿ – ಷ್ಟಿ ಇಂದ ಕೊನೆಗೊಳ್ಳುವ ಪದ
(೨) ವಿದ್ಯೆ ಅವಿದ್ಯೆ, ನಷ್ಟಿ, ತುಷ್ಟಿ – ವಿರುದ್ಧ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ