ಪದ್ಯ ೬೯: ರಾಜನು ತನ್ನ ಅಭ್ಯುದಯಕ್ಕೆ ಯಾವ ಗುಣಗಳನ್ನು ರೂಢಿಸಿಕೊಳ್ಳಬೇಕು?

ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಂ
ಹರಣ ಬಂಧು ದೇಷವತ್ಯಾಲೀಢ ವಾಕ್ಕಥನ
ಶರಣಜನ ದಂಡಿತ್ವವೆಂಬಿವ
ನರವರಿಸದಂಗೈಪ ಭೂಪನ
ಸಿರಿಗೆ ಮೂಡುಗು ಕೇಡು ನಿಮಿಷದೊಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ರಾಜನಾದವನು ಯಾವ ಗುಣವನ್ನು ಬೆಳಸಿಕೊಂಡರೆ ಅವನಿಗೆ ಸಿರಿಯು ಒಲಿಯುತ್ತದೆ ಎಂದು ವಿದುರ ತಿಳಿಸಿದ್ದಾರೆ. ಗುರುವನ್ನು ವಿರೋಧಿಸುವವ, ಬ್ರಾಹ್ಮಣರನ್ನು ಹೊಟ್ಟೆಕಿಚ್ಚಿನಿಂದ ನೋಡುವವ, ಗುಣಗಳನ್ನು ಕೊಲ್ಲುವವ, ಬಂಧುಗಳನ್ನು ದ್ವೇಷಿಸುವ, ಇನ್ನೊಬ್ಬರ ಮನಸ್ಸನ್ನು ಗಾಯಗೊಳಿಸುವ ಮಾತನಾಡುವ, ಆಶ್ರಿತರನ್ನು ಶಿಕ್ಷಿಸುವ, ಈ ಗುಣಗಳನ್ನು ರಾಜನಾದವನು ರೂಢಿಸಿಕೊಂಡರೆ ಅವನ್ ಐಶ್ವರ್ಯಕ್ಕೆ ಕ್ಷಣಮಾತ್ರದಲ್ಲಿ ಕೇಡುಂಟಾಗುತ್ತದೆ.

ಅರ್ಥ:
ಗುರು: ಆಚಾರ್ಯ; ವಿರೋಧ: ಎದುರು,ವೈರತ್ವ, ಹಗೆತನ; ಮಹಿ: ಭೂಮಿ; ಮಹೀಬುಧರು: ಬ್ರಾಹ್ಮಣರು; ಮತ್ಸರ:ಹೊಟ್ಟೆಕಿಚ್ಚು, ಈರ್ಷ್ಯೆ; ದೈವ: ಸುರ, ದೇವತೆ; ದ್ರೋಹ:ವಿಶ್ವಾಸಘಾತ, ವಂಚನೆ, ಮೋಸ; ಗುಣ:ನಡತೆ, ಸ್ವಭಾವ; ಸಂಹರಣ: ನಾಶ; ಬಂಧು: ಬಾಂಧವರು; ದ್ವೇಷ: ಹಗೆ; ಆಲೀಢ: ಆವರಿಸಿದ; ವಾಕ್: ಮಾತು, ವಾಣಿ; ಶರಣ:ಆಶ್ರಿತ; ದಂಡಿತ್ವ: ಹೊಡೆಯುವ, ದಂಡಿಸು, ಶಿಕ್ಷಿಸು; ಅರವರಿಸು: ವಿಚಾರಿಸು, ಕಡೆಗಣಿಸು; ಭೂಪ: ರಾಜ; ಸಿರಿ: ಐಶ್ವರ್ಯ; ಮೂಡು: ಹುಟ್ಟು; ಕೇಡು:ಆಪತ್ತು, ಕೆಡಕು; ನಿಮಿಷ: ಕ್ಷಣಮಾತ್ರ; ಅರಸ: ರಾಜ;

ಪದವಿಂಗಡಣೆ:
ಗುರು +ವಿರೋಧ +ಮಹೀಬುಧರ+ ಮ
ತ್ಸರವು+ ದೈವದ್ರೋಹ +ಗುಣ+ ಸಂ
ಹರಣ+ ಬಂಧು+ ದೇಷವ್+ಅತಿ+ಆಲೀಢ +ವಾಕ್ಕಥನ
ಶರಣಜನ+ ದಂಡಿತ್ವವ್+ಎಂಬ್+ಇವನ್
ಅರವರಿಸದಂಗೈಪ+ ಭೂಪ
ಸಿರಿಗೆ+ ಮೂಡುಗು+ ಕೇಡು+ ನಿಮಿಷದೊಳ್+ಅರಸ +ಕೇಳೆಂದ

ಅಚ್ಚರಿ:
(೧) ವಿರೋಧ, ಮತ್ಸರ, ಸಂಹರಣ, ದ್ವೇಷ, ವಾಕ್ಕಥನ, ದಂಡಿತ್ವ, – ೬ ಬಗೆಯ ಗುಣಗಳನ್ನು ತ್ಯಜಿಸಬೇಕು
(೨) ಭೂಪ, ಅರಸ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ