ಪದ್ಯ ೫೯:ಎಲೆಯನ್ನು ಯಾವ ರೀತಿ ತಿನ್ನುವುದರಿಂದ ಲಕ್ಷ್ಮಿ ನಮ್ಮ ಬಳಿ ಇರುತ್ತಾಳೆ?

ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣ ಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಸಾಮಾನ್ಯ ಜನರೂ ಸಹ ಎಲೆಯಡಿಕೆಯನ್ನು ಕ್ರಮಬದ್ಧವಾಗಿ ತಿನ್ನಬೇಕೆಂದು ವಿದುರ ನೀತಿ ಇಲ್ಲಿ ತಿಳಿಸುತ್ತದೆ. ವೀಳೆಯದಲೆಯ ತೊಟ್ಟು ತುದಿಗಳನ್ನು ತೆಗೆದು ಹಾಕದೆ, ಸುಣ್ಣವಿಟ್ಟ ಎಲೆಯನ್ನು ಬಿಡದೆ ಕೇವಲ ಎಲೆಯನ್ನು ಹಾಕಿಕೊಂಡು ಸವಿದರೆ, ಹಾಗೆ ಮಾಡುವವನು ಇಂದ್ರನಾಗಲಿ, ಶಿವನಾಗಲಿ ಭಾಗ್ಯಲಕ್ಷ್ಮಿಯು ಅವನನ್ನು ಬಿಟ್ಟುಹೋಗುತ್ತಾಳೆ.

ಅರ್ಥ:
ನಾಗವಲ್ಲಿ: ವೀಳ್ಯದೆಲೆ; ಹಿಂದು: ಹಿಂಬದಿ; ಮುಂದನು: ಮುಂಭಾಗ; ನೀಗಿ:ಬಿಡು, ತೊರೆ, ತ್ಯಜಿಸು; ಕಳೆ: ಕೀಳು; ಚೂರ್ಣ: ಸುಣ್ಣ; ಪರ್ಣ: ಎಲೆ; ತ್ಯಾಗ: ತ್ಯಜಿಸು; ದಂತ: ಹಲ್ಲು; ಸವಿ:ರುಚಿ, ಸ್ವಾದ; ಭೋಗಿಸು:ಸುಖವನ್ನು ಅನುಭವಿಸುವುದು; ಅಮರೇಂದ್ರ: ಇಂದ್ರ; ನಾಗಭೂಷಣ: ಶಿವ; ನಾಗ: ಉರಗ; ಭಾಗ್ಯ:ಸಿರಿ, ಐಶ್ವರ್ಯ; ಭೂಪಾಲ: ರಾಜ; ಚೂರ್ಣಪರ್ಣ: ಸುಣ್ಣದ ವೀಳೆದೆಲೆ;

ಪದವಿಂಗಡಣೆ:
ನಾಗವಲ್ಲಿಯ +ಹಿಂದು +ಮುಂದನು
ನೀಗಿ +ಕಳೆಯದೆ +ಚೂರ್ಣ +ಪರ್ಣ
ತ್ಯಾಗವಿಲ್ಲದೆ +ದಂತಧಾವನ+ ಪರ್ಣವನು +ಸವಿದು
ಭೋಗಿಸುವೊಡ್+ಅಮರೇಂದ್ರನಾಗಲಿ
ನಾಗಭೂಷಣನಾದೊಡ್+ಅವನನು
ನೀಗಿ +ಕಳೆವಳು+ ಭಾಗ್ಯವಧು +ಭೂಪಾಲ+ ಕೇಳೆಂದ

ಅ‍‍ಚ್ಚರಿ:
(೧) ಇಂದ್ರ, ಶಿವನನ್ನು – ಅಮರೇಂದ್ರ, ನಾಗಭೂಷಣ ಎಂದು ಕರೆದಿರುವುದು
(೨) ನೀಗಿ ಕಳೆ – ೨, ೬ ಸಾಲಿನ ಮೊದಲ ಪದಗಳು
(೩) ಹಿಂದು ಮುಂದು – ವಿರುದ್ಧ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ