ಪದ್ಯ ೧೮: ಮಾರ್ಗಮಧ್ಯೆ ಅರ್ಜುನನು ಏನನ್ನು ಕಂಡನು?

ಬೀಳುಕೊಂಡರ್ಜುನನು ಲಕ್ಷ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬಲದೊಳಡಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ (ಉದ್ಯೋಗ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನ ಆಜ್ಞೆಯಮೇರೆಗೆ ಕೃಷ್ಣನನ್ನು ನೋಡಲು ದ್ವಾರಕೆಗೆ ಹೊರಟನು. ದಾರಿಯಲ್ಲಿ ಅವನು ನೃತ್ಯಮಾಡುವ ನವಿಲುಗಳು, ಶುಭಸೂಚಕವಾದ ಪಕ್ಷಿ, ಬಲದ ಹಂಗ, ಎಡದ ಜಿಂಕೆಗಳು ದಾರಿಯನ್ನು ತಿದ್ದಿಕೊಟ್ಟವು, ಇಂತಹ ಶುಭಶಕುನಗಳನ್ನು ಕಂಡು ಅರ್ಜುನನು ಹರ್ಷದಿಂದ ಪ್ರಯಾಣ ಮಾಡಿದನು.

ಅರ್ಥ:
ಬೀಳುಕೊಂಡು: ಪ್ರಯಾಣವನ್ನು ಶುರುಮಾಡು, ಹೊರಡು; ಲೋಲ:ಪ್ರೀತಿಯುಳ್ಳವನು; ಬರುತ: ಆಗಮಿಸುತ್ತಾ; ಕಂಡು: ನೋಡು; ಲೀಲೆ:ಆನಂದ, ಸಂತೋಷ; ನರ್ತಿಸು: ಕುಣಿಯುವ; ನವಿಲು: ಮಯೂರ; ಬಲ: ದಕ್ಷಿಣ ಪಾರ್ಶ್ವ; ಹಾಯ್ದು: ತೆರಳು, ಹೋಗು; ಹರಿಣಿ: ಜಿಂಕೆ; ವಿಶಾಲ:ದೊಡ್ಡದು, ಹಿರಿದು; ಜಾಲ: ಗುಂಪು, ಸಮೂಹ; ಶಕುನ:ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಆಲಿಸು: ಕೇಳುತ್ತಾ; ಹರುಷ: ಸಂತೋಷ;

ಪದವಿಂಗಡಣೆ:
ಬೀಳುಕೊಂಡ್+ಅರ್ಜುನನು +ಲಕ್ಷ್ಮೀ
ಲೋಲನ್+ಅಲ್ಲಿಗೆ+ ಬರುತ +ಕಂಡನು
ಲೀಲೆಯಲಿ +ನರ್ತಿಸುವ +ನವಿಲನು +ಬಲದೊಳ್+ಅಡಹಾಯ್ದು
ಮೇಲೆ +ಹಂಗನ+ ಬಲನ +ಹರಿಣೀ
ಜಾಲದ್+ಎಡನನು +ತಿದ್ದುವಳಿಯ +ವಿ
ಶಾಲ +ಶಕುನವನ್+ಆಲಿಸುತ +ಹರುಷದಲಿ+ ನಡೆತಂದ

ಅಚ್ಚರಿ:
(೧) ಕೃಷ್ಣನನ್ನು ಲಕ್ಷ್ಮೀಲೋಲ ಎಂದು ಕರೆದಿರುವುದು
(೨) ಹಂಗನ ಬಲ, ಹರಣೀಜಾಲದ ಎಡ – ಬಲ ಎಡ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ