ಪದ್ಯ ೬೧: ಏತಕ್ಕೆ ಮರವನ್ನು ಮುರಿಯಬೇಡ ಎಂದು ಯುಧಿಷ್ಠಿರನು ಎಚ್ಚರಿಸಿದನು?

ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು (ವಿರಾಟ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೀಮ, ನೀನು ಮರಾವನ್ನು ಮುರಿದೊಡೆ ನಾವು ಯಾರೆಂದು ಕೌರವರಿಗೆ ತಿಳಿಯುತ್ತದೆ, ಏಕೆಂದರೆ, ಈ ಅಮಾನುಷ ಸಾಹಸ ಭೀಮನಿಗಲ್ಲದೆ ಬೇರೆಯವರಿಗಿರುವುದಿಲ್ಲ. ಅದಕ್ಕೆ ಭೀಮನು ಆ ಸೈನ್ಯದೊಡನೆ ಕೌರವರನ್ನೇ ಸಂಹರಿಸಿದರೆ ನಮ್ಮನ್ನು ಕಂಡು ಹಿಡಿಯಲು ಹೇಗೆ ಸಾಧ್ಯವೆಂದು ಮರುತ್ತರವನ್ನು ನೀಡಿದನು.

ಅರ್ಥ:
ಮರ: ವೃಕ್ಷ; ಮುರಿ: ಸೀಳು; ಅರಿ: ತಿಳಿ; ಅಗ್ರಣಿ: ಶ್ರೇಷ್ಠ, ಮುಂದಾಳು; ಅಮಾನುಷ: ಕ್ರೂರವಾದ; ಪರಮ: ಶ್ರೇಷ್ಠ; ಸಾಹಸ: ಶೌರ್ಯ; ಅರಿಕೆ:ವಿಜ್ಞಾಪನೆ; ಸಹಿತ: ಜೊತೆ; ಒರೆಸಿ: ಸಾಯಿಸು, ಕೊನೆಗಾಣು; ಬಳಿಕ: ನಂತರ; ಮುನಿ: ಕೋಪಿಸು;

ಪದವಿಂಗಡಣೆ:
ಮರನ +ಮುರಿದೊಡೆ +ನಮ್ಮನ್+ಅರಿವನು
ಕುರುಕುಲ+ಅಗ್ರಣಿ+ಈ+ಅಮಾನುಷ
ಪರಮ+ ಸಾಹಸ+ ಭೀಮಸೇನಂಗಲ್ಲದ್+ಇಲ್ಲೆಂದು
ಅರಿಕೆ+ಅಹುದೆನೆ+ ಭೀಮನೆಂದನು
ಕುರುಕುಲಾಗ್ರಣಿ +ಸಹಿತಿದ್+ಎಲ್ಲವನ್
ಒರೆಸಿ +ಕಳೆದೊಡೆ +ಬಳಿಕ +ನಮಗಾರುಂಟು +ಮುನಿವವರು

ಅಚ್ಚರಿ:
(೧) ಕುರುಕುಲಾಗ್ರಣಿ – ೨, ೫ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ