ಪದ್ಯ ೫೮: ವಿರಾಟನ ಸಹೋದರರ ಅಳಲೇನು?

ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಿಲೀಸುವನೇ ವಿರಾಟನನೆನುತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು (ವಿರಾಟ ಪರ್ವ, ೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಮತ್ಸ್ಯದೇಶದ ಸೈನ್ಯವು, “ಕ್ಷುಲ್ಲಕರಾದವರು ದೊರೆಯನ್ನು ಶತ್ರುವಿಗೆ ಒಪ್ಪಿಸಿದರು. ದೊರೆಯು ಸೆರೆ ಸಿಕ್ಕನು. ಕೀಚನನು ಬೇಡ, ಅವನ ನೆರಳಿದ್ದರೂ ಸಾಕಿರುತ್ತಿತ್ತು, ದೊರೆಯನ್ನು ಬಿಟ್ಟು ಕೊಡುತ್ತಿದ್ದರು ಎಂದು ಹೇಳುತ್ತಾ ಅಳುತ್ತಿದ್ದರು, ವಿರಾಟನ ತಮ್ಮಂದಿರು ತನ್ನ ಬಲದಳತೆಯನ್ನು ಮರೆತು ನುಗ್ಗಿದರೆ ಭುಜಭಂಗವಾಗುತ್ತದೆ, ಯುದ್ಧಕ್ಕೆ ಹೋಗೆ ಸೆರೆ ಸಿಕ್ಕನಲ್ಲಾ ಇದೆಂಥ ಹುಡುಗಾಟ, ವಿರಾಟನು ಯುದ್ಧಕ್ಕೆ ಏಕೆ ಹೋದನು ಎಂದು ಹೇಳುತ್ತಾ ಅಳಲಿದರು.

ಅರ್ಥ:
ಸಿಕ್ಕು: ಸೆರೆಯಾಗು; ದೊರೆ: ರಾಜ; ಒಪ್ಪು: ಸಮ್ಮತಿಸು; ಚುಕ್ಕಿ: ಚಿಕ್ಕ; ನೆಳಲು: ನೆಅರ್ಳು
ಈಸು:ಬಾಳು; ಬಲ: ಶಕ್ತಿ, ಸೈನ್ಯ; ಬೆದರೆ: ಭಯ, ಅಂಜಿಕೆ; ಉಕ್ಕು: ಮೇಲಕ್ಕೆ ಉಬ್ಬು, ಹಿಗ್ಗು; ಹೆಗಲು: ಭುಜ; ಬೇವುದು: ಮರೆತು; ಮಕ್ಕಳು: ಕಂದ; ಆಟಿಕೆ: ಆಟದ ವಸ್ತು; ಒದರು: ಹೇಳು; ಸಹೋದರ: ತಮ್ಮ;

ಪದವಿಂಗಡಣೆ:
ಸಿಕ್ಕಿದನು +ದೊರೆ+ ಒಪ್ಪುಗೊಟ್ಟರು
ಚುಕ್ಕಿಗಳು+ ಕೀಚಕನ+ ನೆಳಲಿರೆ
ಸಿಕ್ಕಿಲ್+ಈಸುವನೇ +ವಿರಾಟನನ್+ಎನುತ +ಬಲ +ಬೆದರೆ
ಉಕ್ಕಿದಾತನ+ ಹೆಗಲು +ಬೇವುದು
ಮಕ್ಕಳಾಟಿಕೆಯಾಯ್ತು +ತಾ +ಕೈ
ಯಿಕ್ಕಲ್+ಏಕೆಂದ್+ಒದರಿದರು +ಮತ್ಸ್ಯನ +ಸಹೋದರರು

ಅಚ್ಚರಿ:
(೧) ಸಿಕ್ಕಿ, ಉಕ್ಕಿ, ಚುಕ್ಕಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ