ಪದ್ಯ ೫೭: ಸುಶರ್ಮ ಮತ್ತು ವಿರಾಟನ ಯುದ್ಧ ಹೇಗಿತ್ತು?

ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ (ವಿರಾಟ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಬಾಣಗಳ ಯುದ್ಧವಾದಮೇಲೆ, ಚಿಕ್ಕ ಕತ್ತಿಯನ್ನು ತಿರುಗಿಸುತ್ತಾ ಯುದ್ಧ ಮಾಡಿದರು, ಇದಾದನಂತರ ಗದೆಯಿಂದ ಕಾದಾಡಿದರು, ಗದೆಯ ನಂತರ ಕತ್ತಿ, ಗುರಾಣಿಗಳಿಂದ ಇಬ್ಬರು ವೀರಾವೇಶದಿಂದ ಕಾದಿದರು. ವಿರಾಟನ ಶಸ್ತ್ರ ಕೌಶಲ್ಯವನ್ನು ಹೊಗಳುತ್ತಾ ಸುಶರ್ಮನು ವಿರಾಟ್ನ ಪೆಟ್ಟನು ಸಹಿಸಿಕೊಂಡು ಅವನನ್ನು ಬಂಧಿಸಿದನು.

ಅರ್ಥ:
ಸರಳು:ಬಾಣ, ಅಂಬು; ತೀರಲು: ಮುಗಿಯಲು; ಕಿತ್ತು: ತೆಗೆದು; ಸುರಗಿ: ಸಣ್ಣ ಕತ್ತಿ, ಚೂರಿ; ತಿರುಹಿ: ತಿರುಹಿಸು; ಹೊಯ್ದಾಡು: ಮೇಲೆ ಬಿದ್ದು ಹೊಡೆದಾಡು; ಮುರಿ: ಬಾಗು, ಸೀಳು; ಪರಿಘ:ಗದೆ; ಕಾದಿದರು: ಹೋರಾಡಿದರು; ಹೊಕ್ಕು: ಸೇರು; ಹಲಗೆ:ಒಂದು ಬಗೆಯ ಗುರಾಣಿ; ಖಡ್ಗ: ಕತ್ತು; ಬೆರಸು: ಮಿಶ್ರಮಾಡು; ತಿವಿದು: ಚೂಪಾದ ಆಯುಧದಿಂದ ಚುಚ್ಚು; ಭರವ:ವೇಗ, ಉದ್ರೇಕ; ಹೊಗಳು: ಪ್ರಶಂಸೆ; ಕಲಿ: ವೀರ; ಉರವಣಿಸು: ಆತುರಿಸು; ಗಾಯ: ಪೆಟ್ಟು; ಹಿಡಿ: ಬಂಧಿಸು;

ಪದವಿಂಗಡಣೆ:
ಸರಳು +ತೀರಲು +ಕಿತ್ತು +ಸುರಗಿಯ
ತಿರುಹಿ +ಹೊಯ್ದಾಡಿದರು +ಮುರಿದೊಡೆ
ಪರಿಘದಲಿ +ಕಾದಿದರು +ಹೊಕ್ಕರು +ಹಲಗೆ +ಖಡ್ಗದಲಿ
ಬೆರಸಿ +ತಿವಿದಾಡಿದರು +ಮತ್ಸ್ಯನ
ಭರವ +ಹೊಗಳುತ +ಕಲಿ +ಸುಶರ್ಮಕನ್
ಉರವಣಿಸಿದನು +ಗಾಯವಡೆದು +ವಿರಾಟನನು +ಹಿಡಿದ

ಅಚ್ಚರಿ:
(೧) ಸರಳು, ಸುರಗಿ, ಪರಿಘ, ಖಡ್ಗ – ಆಯುಧಗಳ ವಿವರಣೆ
(೨) ಹೊಯ್ದಾಡಿದರು, ಕಾದಿದರು, ತಿವಿದಾಡಿದರು – ಯುದ್ಧವನ್ನು ವಿವರಿಸುವ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ