ಅವಧಿ ತೀರಲಿ ಮೇಣು ಮಾಣಲಿ
ಎವಗೆ ತುರುಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು (ವಿರಾಟ ಪರ್ವ, ೫ ಸಂಧಿ, ೪೮ ಪದ್ಯ)
ತಾತ್ಪರ್ಯ:
ಧರ್ಮರಾಯನು ತನ್ನ ತಮ್ಮಂದಿರ ಬಳಿ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, ಅಜ್ಞಾತವಾಸದ ಅವಧಿ ಮುಗಿಯಲಿ ಬಿಡಲಿ, ಗೋವುಗಳಿಗೆ ಸಂಕಟವಾಗಿರುವುದನ್ನು ಕೇಳಿ, ನೀರನ್ನು ಕುಡಿದರೂ ಬರುವ ಪಾಪವನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ಅದು ಹಾಗಿರಲಿ, ವಿರಾಟ ಬಲದ ಹಿಂದೆ ಹೋಗಿ ಗೋವುಗಳನ್ನು ಹಿಂದಿರುಗಿಸುತ್ತೇನೆ, ಎಂದು ಧರ್ಮಜನು ನಿಶ್ಚಯಿಸಿದನು.
ಅರ್ಥ:
ಅವಧಿ: ಕಾಲ, ಪರಿಮಿತಿ; ತೀರು: ಮುಗಿಸು; ಮೇಣು: ಅಥವ; ಮಾಣು: ತಡಮಾಡು; ಎವಗೆ: ನಮಗೆ; ತುರು: ಗೋವು; ಹುಯ್ಯು:ಹೊಡೆ, ಬಡಿ; ಕೇಳು: ಆಲಿಸು; ಕಿವಿ: ಕರಣ; ಉದಕ: ನೀರು; ಕೊಂಡು: ತೆಗೆದುಕೊ; ಪಾತಕ: ಪಾಪ; ನೂಕು: ಸಾಗು ; ಸಾಕು: ಕೊನೆ; ಬೆಂಬಲ: ಸಹಾಯ, ಆಸರೆ; ವರ: ಶ್ರೇಷ್ಠ; ಗೋ:ಗೋವು; ನಿವಹ: ಗುಂಪು; ಮರಳಿ: ಮತ್ತೆ; ಮರಳಿಚು: ಹಿಂದಿರುಗಿಸು;
ಪದವಿಂಗಡಣೆ:
ಅವಧಿ+ ತೀರಲಿ +ಮೇಣು +ಮಾಣಲಿ
ಎವಗೆ +ತುರು+ಹುಯ್ಯಲನು+ ಕೇಳಿದು
ಕಿವಿಯಲ್+ಉದಕವ+ ಕೊಂಡಡಾ+ ಪಾತಕವನ್+ಎಣಿಸುವೊಡೆ
ಎವಗೆ +ನೂಕದು +ಸಾಕದಂತಿರಲ್
ಅವರ+ ಬೆಂಬಳಿ+ವಿಡಿದು +ವರಗೋ
ನಿವಹವನು +ಮರಳಿಚುವೆನ್+ಎಂದನು +ಧರ್ಮನಂದನನು
ಅಚ್ಚರಿ:
(೧) ‘ಕ’ ಕಾರದ ಜೋಡಿ ಪದ – ಕೇಳಿದು ಕಿವಿಯಲುದಕವ ಕೊಂಡದಾ