ಪದ್ಯ ೩೭: ಕೌರವ ಸೈನ್ಯವು ಹೇಗೆ ಮುನ್ನುಗ್ಗಿತು?

ಸೆಳೆವ ಸಿಂಧವ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳಿರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ (ವಿರಾಟ ಪರ್ವ, ೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹಾರಾಡುವ ಬಾವುಟಗಳು, ನವಿಲುಗರಿಗಳ ಆಕೃತಿ, ತೋಮರ, ಡೊಂಕಣಿ ಮೊದಲಾದ ಆಯುಧಗಳು, ಚಾಮರ್ಗಳು ಇವುಗಳು ಒತ್ತಾಗಿರಲು ಗಾಳಿಗೆ ಹೋಗಲು ಜಾವಗಿಲ್ಲದಂತಾಯಿತು. ಸೂರ್ಯನ ಬೆಳಕು ಭೂಮಿಯನ್ನು ಮುಟ್ಟಲಿಲ್ಲ. ಇದಕ್ಕೆದುರಾರು ಎಂಬಂತಹ ಸೈನ್ಯ ಮುಂದುವರೆಯಿತು.

ಅರ್ಥ:
ಸೆಳೆ:ಎಳೆತ,ಆಕರ್ಷಿಸು; ಸಿಂಧವ: ಬಾವುಟ; ಹೀಲಿ: ನವಿಲುಗರಿ;ವಳಯ: ಸುತ್ತುವರೆದ; ಕವಿ: ದಾಳಿಮಾಡು, ದಟ್ಟವಾಗು; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಚಮರ: ಚಾಮರ; ಡೊಂಕಣಿ: ಈಟಿ; ವಿಡಾಯಿ:ಶಕ್ತಿ, ತೋರಿಕೆ; ಅಮಮ: ಅಬ್ಬಬ್ಬ; ಕೆತ್ತು: ನಡುಕ, ಸ್ಪಂದನ; ಗಗನ: ಆಗಸ; ಅಳ್ಳಿರಿ: ನಡುಗಿಸು, ಚುಚ್ಚು; ಸುಳಿ:ಜಲಾವರ್ತ ; ಪಥ: ದಾರಿ; ಹೊಳಕು: ಕಾಣಿಸಿಕೊಳ್ಳು; ರವಿ: ಭಾನು; ನೆಲ: ಭೂಮಿ; ದಳ: ಸೈನ್ಯ; ಜೋಡಿಸು: ಕೂಡಿಸು;ಆನಿಲ: ಗಾಳಿ

ಪದವಿಂಗಡಣೆ:
ಸೆಳೆವ +ಸಿಂಧವ +ಕವಿವ +ಹೀಲಿಯ
ವಳಯ +ತೋಮರ +ಚಮರ +ಡೊಂಕಣಿ
ಗಳ +ವಿಡಾಯಿಯಲ್+ಅಮಮ +ಕೆತ್ತುದು +ಗಗನವ್+ಅಳ್ಳಿರಿಯೆ
ಸುಳಿಯಲ್+ಅನಿಲಂಗ್+ಇಲ್ಲ+ ಪಥ+ ಕೈ
ಹೊಳಕಬಾರದು +ರವಿಗೆ+ ನೆಲನ್+ಈ
ದಳವನ್+ಆನುವಡರಿದ್+ಎನಲು +ಜೋಡಿಸಿತು +ಕುರುಸೇನೆ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪದ – ಅಮಮ
(೨) ಸೈನ್ಯದ ಗಾತ್ರ ಮತ್ತು ದಟ್ಟತೆಯನ್ನು ವಿವರಿಸಲು – ಗಾಳಿಯೂ ತೂರಲು ಜಾಗವಿಲ್ಲ ಎಂದು ಹೇಳಲು – ಸುಳಿಯಲನಿಲಂಗಿಲ್ಲ ಪಥ, ಕೈ ಹೊಳಕಬಾರದು ರವಿಗೆ ನೆಲ;