ಪದ್ಯ ೧೭: ಶಿಶುಪಾಲನು ಭೀಷ್ಮನನ್ನು ಏನು ಕೇಳಿದನು?

ತರಳರ ವದಿರು ಪಾಂಡುಸುತರಂ
ತಿರಲಿ ನೀ ಸುಪ್ರೌಢನೆಂದಾ
ದರಿಸಿದೈ ವಸುದೇವಸುತನಲಿ ಶಿಷ್ಟಯೋಗ್ಯತೆಯ
ಧರಣಿಪಾಲರ ಮಧ್ಯದಲಿ ಬಾ
ಸ್ಕರನು ಗಡ ತುರುಪಳ್ಳಿಕಾರರ
ಪುರದ ಭಾಸ್ಕರನೀತನಲ್ಲಾ ಭೀಷ್ಮ ಹೇಳೆಂದ (ಸಭಾ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಪಾಂಡವರಿನ್ನು ಹುಡುಗರು, ಅವರ ಮಾತು ಹಾಗಿರಲಿ, ನೀನಾದರೋ ಹಿರಿಯವ, ನೀನು ಹೇಗೆ ಈ ವಸುದೇವನ ಮಗನಾದ ಕೃಷ್ಣನಲ್ಲಿ ಯಾಗ ಪೂಜೆಗೆ ಅರ್ಹಮಾಡುವ ಯಾವ ಯೋಗ್ಯತೆಯನ್ನು ಕಂಡೆ? ಸಮಸ್ತ ಭೂಮಂಡಲದ ರಾಜರ ಮಧ್ಯ ಈ ಕೃಷ್ಣನು ಅಗ್ರಗಣ್ಯನೇ? ಇವನು ಗೊಲ್ಲರ ಹಳ್ಳಿಗಳ ಗೋವರ ನಡುವೆ ಸೂರ್ಯನಲ್ಲವೇ? ನೀನೇ ಹೇಳು ಎಂದು ಶಿಶುಪಾಲನು ಭೀಷ್ಮನನ್ನು ಕೇಳಿದನು.

ಅರ್ಥ:
ತರಳ: ಚಂಚಲವಾದ, ಬಾಲಕ; ಸುತ: ಮಕ್ಕಳು; ಸುಪ್ರೌಢ: ಹಿರಿಯವ; ಆದರಿಸು: ಗೌರವಿಸು; ಶಿಷ್ಟ: ಒಳ್ಳೆಯವ, ಯೋಗ್ಯ; ಧರಣಿಪಾಲಕ: ರಾಜ; ಮಧ್ಯ:ನಡುವೆ; ಭಾಸ್ಕರ: ಸೂರ್ಯ; ಗಡ:ಅಲ್ಲವೆ; ಪಳ್ಳಿ: ಹಳ್ಳಿ; ಪುರ: ಊರು; ತುರು: ಗೋವು;

ಪದವಿಂಗಡಣೆ:
ತರಳರ +ವದಿರು +ಪಾಂಡು+ಸುತರ್
ಅಂತಿರಲಿ +ನೀ +ಸುಪ್ರೌಢನೆಂದ್
ಆದರಿಸಿದೈ+ ವಸುದೇವ+ಸುತನಲಿ+ ಶಿಷ್ಟಯೋಗ್ಯತೆಯ
ಧರಣಿಪಾಲರ+ ಮಧ್ಯದಲಿ +ಬಾ
ಸ್ಕರನು+ ಗಡ+ ತುರುಪಳ್ಳಿಕಾರರ
ಪುರದ+ ಭಾಸ್ಕರನ್+ಈತನಲ್ಲಾ +ಭೀಷ್ಮ +ಹೇಳೆಂದ

ಅಚ್ಚರಿ:
(೧) ಕೃಷ್ಣನನ್ನು ಜರಿದ ಬಗೆ – ತುರುಪಳ್ಳಿಕಾರರ ಪುರದ ಭಾಸ್ಕರ
(೨) ಭಾಸ್ಕರನು – ೨ ಬಾರಿ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ