ಆ ಋಷಿಗಳಾ ಕ್ಷತ್ರ ಜನದಾ
ಭೂರಿ ನಿಕರದ ವೇದಶಾಸ್ತ್ರ ವಿ
ಚಾರಣರ ಚಾರಣರ ಸಂಗೀತಾದಿ ಕಳಕಳದ
ಆರುಭಟೆ ಮಥಿತಾಂಬುನಿಧಿಯೊಡ
ನಾರುವವೊಲುಬ್ಬೆದ್ದ ಬಲು ಜ
ರ್ಝಾರವೆನೆ ಜಡಿದುದು ಯುಧಿಷ್ಠಿರ ರಾಜಸೂಯದಲಿ (ಸಭಾ ಪರ್ವ, ೮ ಸಂಧಿ, ೩೭ ಪದ್ಯ)
ತಾತ್ಪರ್ಯ:
ಆ ಋಷಿಗಳು, ಆ ಕ್ಷತ್ರಿಯರು, ಆ ಜನಸಂದಣಿ, ಆ ಬ್ರಾಹ್ಮಣ ಸಭೆ ವೇದಶಾಸ್ತ್ರವಿಚಾರ, ಚಾರಣರ ಘೋಷಣೆಗಳು ಸಂಗೀತದ ಸದ್ದು ಇವೆಲ್ಲವೂ ಸಮುದ್ರವನ್ನು ಕಡೆದರೆ ಆಗುವ ಸದ್ದಿನಂತೆ ಉಬ್ಬೆದ್ದು ರಾಜಸೂಯಯಾಗವು ರಂಜಿಸಿತು.
ಅರ್ಥ:
ಋಷಿ: ಮುನಿ; ಕ್ಷತ್ರ: ಕ್ಷತ್ರಿಯರು; ಭೂರಿ: ಹೆಚ್ಚು, ಅಧಿಕ; ನಿಕರ: ಗುಂಪು; ವೇದ: ಶೃತಿ; ಶಾಸ್ತ್ರ: ಧರ್ಮಸೂಕ್ಷ್ಮಗಳನ್ನು ತಿಳಿಸುವ; ವಿಚಾರಣ: ವಿಷಯವನ್ನು ಪರೀಕ್ಷಿಸುವುದು; ಚಾರಣ:ತಿರುಗಾಡುವಿಕೆ, ಸಂಚಾರ; ಸಂಗೀತ: ಗೀತೆ, ಹಾಡು; ಕಳಕಳ: ಸದ್ದು; ಆರುಭಟೆ: ಗಟ್ಟಿಯಾದ ಕೂಗು, ಗರ್ಜನೆ; ಮಥಿತ: ಕಡಿ, ಅಲುಗಾಡಿಸು; ಅಂಗುಧಿ: ಸಮುದ್ರ; ನಿಧಿ: ಐಶ್ವರ್ಯ; ಉಬ್ಬೆದ್ದು: ರಭಸ; ಬಲು: ಜೋರು; ಜರ್ಝಾರ: ಗಟ್ಟಿಯಾದ ಶಬ್ದ; ಜಡಿ: ಕೂಗು;
ಪದವಿಂಗಡಣೆ:
ಆ +ಋಷಿಗಳ+ಆ+ ಕ್ಷತ್ರ+ ಜನದ+ಆ
ಭೂರಿ +ನಿಕರದ +ವೇದಶಾಸ್ತ್ರ +ವಿ
ಚಾರಣರ +ಚಾರಣರ +ಸಂಗೀತಾದಿ+ ಕಳಕಳದ
ಆರುಭಟೆ +ಮಥಿತ+ಅಂಬುನಿಧಿ+ಯೊಡನ
ಆರುವವೊಲ್+ಉಬ್ಬೆದ್ದ +ಬಲು +ಜ
ರ್ಝಾರವೆನೆ +ಜಡಿದುದು +ಯುಧಿಷ್ಠಿರ+ ರಾಜಸೂಯದಲಿ
ಅಚ್ಚರಿ:
(೧) ಆ ಸ್ವರದ ಬಳಕೆ
(೨) ಚಾರಣ, ಕಳ – ಜೋಡಿ ಪದವಾಗಿ ಬಳಸಿರುವುದು
(೩) ಆರುಭಟೆ, ಆರುವವೊಲ್ – ಆರು ಪದದ ಬಳಕೆ