ಪದ್ಯ ೨೮: ಪಾಂಡವರ ಸಂತೋಷವನ್ನು ವರ್ಣಿಸಲಾಗುತ್ತದೆಯೆ?

ಏನನೆಂಬೆನು ಭೂಪ ಕಾಲನ
ಸೂನುವಿನ ಸುಮ್ಮಾನವನು ಪವ
ಮಾನನಂದನನುತ್ಸವವರ್ನರ್ಜುನನ ಹರುಷವನು
ಮಾನನಿಧಿ ಮಾದ್ರೀಕುಮಾರರ
ಸಾನುಭಾವವನಾ ಮಹೀಶನ
ಮಾನಿನಿಯ ಮನದೊಲಾನಭಿವರ್ಣಿಸುವೊಡರಿದೆಂದ (ಸಭಾ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪುರುಷಮೃಗವನ್ನು ಯಜ್ಞಶಾಲೆಯಲ್ಲಿ ಕಟ್ಟಿದಬಳಿಕ ಪಾಂಡವರು ಸಂತೋಷಗೊಂಡರು. ಧರ್ಮಜನ ಸಂತೋಷ, ಭೀಮನ ಉಲ್ಲಾಸ, ಅರ್ಜುನನ ಹರ್ಷ, ನಕುಲಸಹದೇವನ ಅನುಮೋದ, ದ್ರೌಪದಿಯ ಪ್ರೀತಿಗಳನ್ನು ವರ್ಣಿಸಲು ಸಾಧ್ಯವೆ, ಎನ್ನುವಷ್ಟು ಹರ್ಷಭರಿತರಾಗಿದ್ದರು.

ಅರ್ಥ:
ಏನನೆಂಬೆನು: ಏನು ಹೇಳಲಿ; ಭೂಪ: ರಾಜ; ಕಾಲ: ಯಮ; ಸೂನು: ಮಗ; ಸುಮ್ಮಾನ:ಸಂತೋಷ; ಪವಮಾನ: ವಾಯು; ನಂದನ: ಮಗ; ಉತ್ಸವ: ಸಂಭ್ರಮ; ಹರುಷ: ಸಂತೋಷ; ಮಾನ: ಮರ್ಯಾದೆ; ನಿಧಿ: ಐಶ್ವರ್ಯ; ಕುಮಾರ: ಮಗ; ಸಾನುಭಾವ: ಅನುಕಂಪ; ಮಹೀಶ: ರಾಜ; ಮಾನಿನಿ: ಹೆಣ್ಣು; ಒಲವು: ಪ್ರೀತಿ; ಮನ: ಮನಸ್ಸು; ಅಭಿವರ್ಣಿಸು: ವಿಸ್ತರಿಸು;

ಪದವಿಂಗಡಣೆ:
ಏನನ್ +ಎಂಬೆನು +ಭೂಪ +ಕಾಲನ
ಸೂನುವಿನ+ ಸುಮ್ಮಾನವನು +ಪವ
ಮಾನ+ನಂದನನ್+ಉತ್ಸವವನ್+ಅರ್ಜುನನ+ ಹರುಷವನು
ಮಾನನಿಧಿ +ಮಾದ್ರೀ+ಕುಮಾರರ
ಸಾನುಭಾವವನ+ಆ+ ಮಹೀಶನ
ಮಾನಿನಿಯ +ಮನದ್+ಒಲವನ್+ವರ್ಣಿಸುವೊಡರಿದೆಂದ

ಅಚ್ಚರಿ:
(೧) ಧರ್ಮಜನನ್ನು ಕಾಲನಸೂನು, ಭೀಮನನ್ನು ಪವಮಾನನಂದನ ಎಂದು ಕರೆದಿರುವುದು
(೨) ಸುಮ್ಮಾನ, ಉತ್ಸವ, ಹರುಷ, ಸಾನುಭಾವ, ಒಲವು – ಸಂತೋಷವನ್ನು ವರ್ಣಿಸುವ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ