ಪದ್ಯ ೭: ಭೀಮನು ತನ್ನ ಪ್ರಯಾಣದಲ್ಲಿ ಯಾರನ್ನು ಭೇಟಿಯಾದನು?

ಏನಿದದ್ಭುತ ರಭಸವಿದು ಪವ
ಮಾನಜನ ನಿಷ್ಠುರದ ಸಿಂಹ
ಧ್ವಾನವಹುದೆನುತಂಜನಾಸುತ ಕೇಳಿ ಕಣ್ದೆರೆದು
ಧ್ಯಾನಿಸುತ್ತಿರೆ ಬಂದು ಪವನನ
ಸೂನು ಕಂಡಡಿಗೆರಗಲಂದಾ
ವಾನರನು ತೆಗೆದಪ್ಪಿ ಮುಂಡಾದಿದನು ಪ್ರೇಮದಲಿ (ಸಭಾ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನು ಹಿಮಾಲಯಕ್ಕೆ ಪ್ರಯಾಣ ಬರುತ್ತಿರಲು, ದಾರಿಯಲ್ಲಿ ಹಿಮಾಲಯದ ತಪ್ಪಲಲ್ಲಿದ್ದ ಹನುಮಂತನು ಭೀಮನ ಗರ್ಜನೆಯನ್ನು ಕೇಳೆ ಕಣ್ತೆರೆದು, ಇದು ಭೀಮನದೇ ಗರ್ಜನೆಯಿರಬೇಕೆಂದು ಚಿಂತಿಸುವಷ್ಟರಲ್ಲಿ ಭೀಮನು ಬಂದು ನಮಸ್ಕರಿಸಲು, ಹನುಮಂತನು ಪ್ರೀತಿಯಿಂದ ಆತನನ್ನು ಆಲಂಗಿಸಿಕೊಂಡು ತಲೆಯನ್ನು ಸವರಿದನು.

ಅರ್ಥ:
ಅದ್ಭುತ: ಆಶ್ಚರ್ಯ; ಪವಮಾನಜ: ಪವನಸುತ; ನಿಷ್ಠುರ: ಕಠಿಣವಾದುದು, ಒರಟಾದುದು; ಸಿಂಹ: ಕೇಸರಿ; ಧ್ವಾನ: ಧ್ವನಿ, ಶಬ್ದ; ಅಂಜನಾಸುತ: ಹನುಮಂತ; ಸುತ: ಪುತ್ರ; ಕೇಳಿ: ಆಲಿಸು; ಕಣ್: ನಯನ; ತೆರೆದು: ಬಿಚ್ಚು; ಧ್ಯಾನ: ತಪಸ್ಸು; ಪವನ: ವಾಯು; ಸೂನು: ಪುತ್ರ; ಕಂಡು: ನೋಡಿ; ಅಡಿಗೆ: ಪಾದಕ್ಕೆ; ಎರಗಲು: ನಮಸ್ಕರಿಸಲು; ವಾನರ: ಹನುಮ, ಕಪಿ; ಅಪ್ಪಿ: ಆಲಂಗಿಸು; ಮುಂಡಾಡು: ಮುದ್ದಾಡು; ಪ್ರೇಮ: ಪ್ರೀತಿ, ಒಲವು;

ಪದವಿಂಗಡಣೆ:
ಏನಿದ್+ಅದ್ಭುತ+ ರಭಸವಿದು+ ಪವ
ಮಾನಜನ +ನಿಷ್ಠುರದ+ ಸಿಂಹ
ಧ್ವಾನವಹುದ್+ಎನುತ್+ಅಂಜನಾಸುತ+ ಕೇಳಿ +ಕಣ್ದೆರೆದು
ಧ್ಯಾನಿಸುತ್ತಿರೆ+ ಬಂದು +ಪವನನ
ಸೂನು +ಕಂಡ್+ಅಡಿಗ್+ಎರಗಲ್+ಅಂದಾ
ವಾನರನು +ತೆಗೆದಪ್ಪಿ+ ಮುಂಡಾದಿದನು+ ಪ್ರೇಮದಲಿ

ಅಚ್ಚರಿ:
(೧) ಪವಮಾನಜ, ಪವನನಸೂನು -ಭೀಮನನ್ನು ಕರೆದಿರುವ ಬಗೆ
(೨) ಅಂಜನಾಸುತ – ಹನುಮಂತನನ್ನು ಕರೆದಿರುವ ಬಗೆ

ನಿಮ್ಮ ಟಿಪ್ಪಣಿ ಬರೆಯಿರಿ