ಪದ್ಯ ೩೫: ಹೇಮಕೂಟದ ಪರ್ವತದಲ್ಲಿ ಅರ್ಜುನನು ಯಾರನ್ನು ಸೋಲಿಸಿದನು?

ಹೇಮಕೂಟದ ಗಿರಿಯ ಗಂಧ
ರ್ವಾಮರರ ಝೋಂಪಿಸಿದನವರು
ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ
ಆ ಮಹಾ ಹರಿ ವರುಷದಲ್ಲಿಯ
ಸೀಮೆ ಯೋಜನ ನವಸಹಸ್ರ ವಿ
ರಾಮಚದರೊಳಗಿಲ್ಲ ವಿವರಿಸಲರಿಯೆನಾನೆಂದ (ಸಭಾ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹೇಮಕೂಟ ಪರ್ವತದಲ್ಲಿದ್ದ ದೇವತೆಗಳನ್ನೂ ಗಂಧರ್ವರನ್ನೂ ಜಯಿಸಿ ಅವರಿಂದ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಕೆಳಕ್ಕಿಳಿಸಿದನು. ಹರಿವರ್ಷದ ಒಂಬತ್ತು ಸಾವಿರ ಯೋಜನದ ಸೀಮೆಯಲ್ಲೂ ದಾಳಿಮಾಡಿದನು. ಅದನ್ನು ವಿವರಿಸಲಾಗದು.

ಅರ್ಥ:
ಗಿರಿ: ಬೆಟ್ಟ; ಅಮರ: ದೇವತೆ; ಝೋಂಪಿಸು: ಅಲುಗಾಡಿಸು, ನಡುಗಿಸು; ಉದ್ದಾಮ: ಶ್ರೇಷ್ಠವಾದ; ವಸ್ತು: ಸಾಮಗ್ರಿ; ಕೊಂಡು: ತೆಗೆದುಕೊ; ಇಳಿ: ಕೆಳಕ್ಕೆ ಬಾ; ಬಳಿಕ: ನಂತರ; ಪರ್ವತ: ಬೆಟ್ಟ; ಸೀಮೆ: ಎಲ್ಲೆ, ಗಡಿ; ಯೋಜನ: ಅಳತೆಯ ಪ್ರಮಾಣ; ನವ: ಒಂಬತ್ತು; ಸಹಸ್ರ: ಸಾವಿರ; ವಿರಾಮ: ಅಂತ್ಯ, ಕೊನೆ; ವಿವರಿಸು: ವಿಸ್ತಾರವಾಗಿ ಹೇಳು;

ಪದವಿಂಗಡಣೆ:
ಹೇಮಕೂಟದ +ಗಿರಿಯ +ಗಂಧ
ರ್ವ+ಅಮರರ+ ಝೋಂಪಿಸಿದನ್+ಅವರ್
ಉದ್ದಾಮ +ವಸ್ತುವ +ಕೊಂಡನ್+ಇಳಿದನು+ ಬಳಿಕ+ ಪರ್ವತವ
ಆ +ಮಹಾ +ಹರಿ +ವರುಷದಲ್ಲಿಯ
ಸೀಮೆ+ ಯೋಜನ +ನವ+ಸಹಸ್ರ +ವಿ
ರಾಮ+ಚದರೊಳಗಿಲ್ಲ +ವಿವರಿಸಲ್+ಅರಿಯೆ+ನಾನೆಂದ

ಅಚ್ಚರಿ:
(೧) ಗಿರಿ, ಪರ್ವತ – ಸಮನಾರ್ಥಕ ಪದಗಳು
(೨) ೪,೫,೬ ಸಾಲಿನ ಕೊನೆಯ ಪದ “ವ” ಕಾರವಾಗಿರುವುದು – ವರುಷ, ವಿರಾಮ, ವಿವರಿಸ..

ನಿಮ್ಮ ಟಿಪ್ಪಣಿ ಬರೆಯಿರಿ