ಪದ್ಯ ೧೦೯: ಭೀಮ ಜರಾಸಂಧರ ಸಾಧನೆ ಹೇಗಿತ್ತು?

ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾವಿಗಡರುಗಳಡಸಿ ತಿವಿದಾಡಿದರು ಬೇಸರದೆ (ಸಭಾ ಪರ್ವ, ೨ ಸಂಧಿ, ೧೦೯ ಪದ್ಯ)

ತಾತ್ಪರ್ಯ:
ಭೀಮ ಜರಾಸಂಧರು ಅದೆಂಥ ಸಾಧನೆಯನ್ನು ಮಾಡಿದ್ದರೋ! ಅವರ ಹೊಡೆತದ ಭರಕ್ಕೆ ಬೆಟ್ಟಗಳು ಬಿರುಕುಬಿಟ್ಟವು. ಪರಾಕ್ರಮ ಮಹಾಕೋಪಗಳು ಅವರ ಮೈದುಂಬಿ ಉಕ್ಕಿ ಬಂದವು. ಸೂರ್ಯ ಚಂದ್ರರಿಬ್ಬರೂ ಆಕಾಶದಿಂದ ನೋಡುತ್ತಿರಲು ಅವರು ಮುಷ್ಟಾಮುಷ್ಟಿ ಯುದ್ಧವನ್ನು ಬೇಸರವಿಲ್ಲದೆ ಮುಂದುವರೆಸಿದರು.

ಅರ್ಥ:
ಸಾಧನೆ: ಪರಿಶ್ರಮ, ಅಭ್ಯಾಸ; ವಿಘಾತಿ: ಹೊಡೆತ, ವಿರೋಧ; ಅದ್ರಿ: ಬೆಟ್ಟ; ಬಿರಿ: ಸೀಳು ಬಿಡು; ಮೈವಳಿ: ವಶ, ಅಧೀನ; ಉಕ್ಕು: ಹೆಚ್ಚಾಗು; ಕಡುಹು: ಪರಾಕ್ರಮ; ಖತಿ: ರೇಗುವಿಕೆ, ಕೋಪ;ಕೈಮಸಕ: ಮಾಟ; ತಾವರೆ: ಕಮಲ; ಕುಮುದ:ಬಿಳಿಯ ನೈದಿಲೆ; ಜೀವಿ: ಪ್ರಾಣಿ, ಪಕ್ಷಿ; ಮಿಗೆ: ಮತ್ತು; ನೋಟ: ದೃಷ್ಟಿ; ಬೇಸರ: ಬೇಜಾರು; ತಿವಿದಾಡು: ಹೋರಾಡು;

ಪದವಿಂಗಡಣೆ:
ಆವ +ಸಾಧನೆಯೋ +ವಿಘಾತಿಯಲ್
ಆವಣಿಗೆಗ್+ಅದ್ರಿಗಳು +ಬಿರಿದವು
ಮೈವಳಿಯಲ್+ಉಕ್ಕಿದುದು +ಕಡುಹಿನ+ ಖತಿಯ +ಕೈಮಸಕ
ತಾವರೆಯತ್+ಎತ್ತಿಗನ+ ಕುಮುದದ
ಜೀವಿಗನ +ಮಿಗೆ +ಮೇಲು +ನೋಟದೊಳ್
ಆವಿಗಡರ್+ಉಗಳಡಸಿ +ತಿವಿದಾಡಿದರು+ ಬೇಸರದೆ

ಅಚ್ಚರಿ:
(೧) ಸೂರ್ಯ ಚಂದ್ರರು ಎಂದು ಹೇಳಲು – ತಾವರೆಯತೆತ್ತಿಗನ ಕುಮುದದ ಜೀವಿಗನ

ನಿಮ್ಮ ಟಿಪ್ಪಣಿ ಬರೆಯಿರಿ