ಪದ್ಯ ೯೬: ರಾಜಸೂಯ ಯಾಗದ ಮಹತ್ವವೇನು?

ಆ ಮಹಾಕ್ರತುವರವ ನೀ ಮಾ
ಡಾ ಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೯೬ ಪದ್ಯ)

ತಾತ್ಪರ್ಯ:
ನಾರದರು ಯುಧಿಷ್ಠಿರನಿಗೆ ರಾಜಸೂಯ ಯಾಗವನ್ನು ಮಾಡಲು ಪ್ರೇರೇಪಿಸುತ್ತಾರೆ. ರಾಜನೆ, ನೀನು ಶ್ರೇಷ್ಠವಾದ ಈ ರಾಜಸೂಯ ಮಹಾಯಾಗವನ್ನು ಮಾಡಿದರೆ, ನಿನ್ನ ತಂದೆಯು ಇಂದ್ರನ ಆಸ್ಥಾನದಲ್ಲಿ ಮಹಾಸುಕೃತಿಗಳಾದ ರಾಜರ ಪಂಕ್ತಿಯಲ್ಲಿರುತ್ತಾರೆ, ಚಂದ್ರವಂಶದ ರಾಜಕುಮಾರರಲ್ಲಿ ಮಹಾಶಕ್ತರಾದ ನೀವು ಇರಬೇಕಾದರೆ ನಿಮ್ಮ ತಂದೆ ಏನುತಾನೆ ಅಸಾಧ್ಯ” ಎಂದು ನಾರದರು ನುಡಿದರು.

ಅರ್ಥ:
ಕ್ರತು: ಯಜ್ಞ; ವರ: ಶ್ರೇಷ್ಠ; ನಿರಾಮಯ: ಮುಕ್ತನಾದ,ಪರಿಶುದ್ಧವಾದ; ಅಯ್ಯ: ತಂದೆ; ತೇಜ: ಕಾಂತಿ; ಸೋಮ: ಚಂದ್ರ; ವಂಶ:ಕುಲ; ರಾಯ: ರಾಜ; ಉದ್ದಾಮ: ಶ್ರೇಷ್ಠವಾದ; ಸ್ತೋಮ: ಗುಂಪು, ಸಮೂಹ; ಕುಮಾರ: ಮಕ್ಕಳು; ಮುನಿಪ: ಋಷಿ; ಮಹೀಶ್ವರ: ರಾಜ; ಬಲುಗೈ: ಪರಾಕ್ರಮ;

ಪದವಿಂಗಡಣೆ:
ಆ +ಮಹಾ+ಕ್ರತುವರವ +ನೀ +ಮಾಡ್
ಆ +ಮಹೀಶ್ವರ+ ಪಂಕ್ತಿಯಲ್ಲಿ+ ನಿ
ರಾಮಯನು +ನಿಮ್ಮಯ್ಯನ್+ಇಹನು +ಸತೇಜದಲಿ +ಬಳಿಕ
ಸೋಮವಂಶದ+ ರಾಯರೊಳಗ್+
ಉದ್ದಾಮರಹ +ಬಲುಗೈ +ಕುಮಾರ
ಸ್ತೋಮ +ನೀವಿರಲ್+ಅಯ್ಯಗೇನ್+ಅರಿದೆಂದನಾ +ಮುನಿಪ

ಅಚ್ಚರಿ:
(೧) ೧, ೨ ಸಾಲಿನ ಮೊದಲ ಪದ “ಆ” ಕಾರದಿಂದ ಪ್ರಾರಂಭ
(೨) ಮಹೀಶ್ವರ, ರಾಯ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ