ಪದ್ಯ ೯೫: ಹರಿಶ್ಚಂದ್ರ ಮತ್ತು ಪಾಂಡು ತಮ್ಮ ಕಾಲದ ಬಳಿಕ ಯಾವ ಲೋಕಕ್ಕೆ ಹೋದರು?

ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಫನವನರಿಯಾ ಧರ್ಮನಂದನಯೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೯೫ ಪದ್ಯ)

ತಾತ್ಪರ್ಯ:
ಇಷ್ಟುಜನರಿರುವ ಇಂದ್ರನ ಆಸ್ಥಾನದಲ್ಲಿ ಒಳ್ಳೆಯ ಕೆಲಸ ಮಾಡಿದ ತೇಜಸ್ವಿಗಳಿರುವರೆಂದರಲ್ಲವೆ? ಹಾಗದರೆ ಹರಿಶ್ಚಂದ್ರ ಮಹಾರಾಜರು ಮಾಡಿದ ಪುಣ್ಯವೇನು, ನಮ್ಮ ತಂದೆ ಪಾಂಡುಮಹಾರಾಜರು ಮಾಡಿದ ಪಾಪವೇನು ಎಂದು ಧರ್ಮರಾಯಕೇಳಲು, ನಾರದರು ನಕ್ಕು, ರಾಜಸೂಯ ಯಾಗದ ಮಹಿಮೆ ನಿನಗೆ ತಿಳಿಯದೆ ಎಂದು ಕೇಳಿದರು.

ಅರ್ಥ:
ಇನಿಬರ್: ಇಷ್ಟು ಜನ; ಆಸ್ಥಾನ: ಸಭೆ; ಸುಕೃತಿ: ಭಾಗ್ಯವಂತ, ಪುಣ್ಯವಂತ; ತೇಜಸ್ವಿ: ಕಾಂತಿಯುಳ್ಳವನು; ಗಡ:ಅಲ್ಲವೆ; ಸುರಮುನಿ: ನಾರದ; ಸುಕೃತ: ಒಳ್ಳೆಯ ಕೆಲಸ; ಫಲ: ಫಲಿತಾಂಶ; ಜನಪ: ರಾಜ; ಅಪದೆಸೆ: ದುರ್ಭಾಗ್ಯ; ದುಷ್ಕೃತ: ಕೆಟ್ಟ ಕೆಲಸ; ನಕ್ಕು: ಹಸನ್ಮುಖ; ಘನ: ಶ್ರೇಷ್ಠ; ಅರಿ: ತಿಳಿ; ನಂದನ: ಮಗ; ಮುನಿಪ: ಋಷಿ;

ಪದವಿಂಗಡಣೆ:
ಇನಿಬರ್+ಆಸ್ಥಾನದಲಿ+ ಸುಕೃತಿಗಳ್
ಎನಿಪ +ತೇಜಸ್ವಿಗಳು +ಗಡ+ ಸುರ
ಮುನಿ +ಹರಿಶ್ಚಂದ್ರಂಗೆ +ಸೇರಿದ +ಸುಕೃತ +ಫಲವೇನು
ಜನಪನ್+ಅಪದೆಸೆಗ್+ಏನು +ದುಷ್ಕೃತವ್
ಎನಲು+ ನಕ್ಕನು +ರಾಜಸೂಯದ
ಫನವನ್+ಅರಿಯಾ +ಧರ್ಮನಂದನ+ಎಂದನಾ +ಮುನಿಪ

ಅಚ್ಚರಿ:
(೧) ಸುಕೃತ, ದುಷ್ಕೃತ – ವಿರುದ್ಧ ಪದಗಳು
(೨) ಇನಿಬರ್, ಗಡ – ಪದಗಳ ಬಳಕೆ
(೩) ೧, ೪ ಸಾಲಿನಲ್ಲಿ ೨ ಪದಗಳು ಮಾತ್ರ – ಇನಿಬರಾಸ್ಥಾನದಲಿ ಸುಕೃತಿಗ; ಜನಪನಪದೆಸೆಗೇನು ದುಷ್ಕೃತ
(೪) ೧-೪ ಸಾಲುಗಳ ಕೊನೆ ಪದಗಳು – “ಉ” ಕಾರದಿಂದ ಪ್ರಾರಂಭ – ಸುಕೃತಿ, ಸುರ, ಸುಕೃತ, ದುಷ್ಕೃತ

ನಿಮ್ಮ ಟಿಪ್ಪಣಿ ಬರೆಯಿರಿ