ನರಕ ಕರ್ಮವ ಮಾಡಿಯಿಹದೊಳು
ದುರಿತ ಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾಯೋನಿಯೊಳು ಸುಳಿದು
ಹೊರಳುವರು ಕೆಲಕೆಲವು ಭೂಪರು
ಧರಿಸುವರಲೈ ರಾಜಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೮೫ ಪದ್ಯ)
ತಾತ್ಪರ್ಯ:
ಈ ಲೋಕದಲ್ಲಿ ಪಾಪಕರ್ಮಗಳನ್ನು ಮಾಡಿ ನರಕ ಭಾಜನರಾಗಿ, ಸದ್ಗತಿಗೆ ಎರವಾಗಿ ನಾನಾಯೋನಿಗಳಲ್ಲಿ ಹುಟ್ಟಿ ಅನೇಕ ರಾಜರು ದುಃಖದಲ್ಲಿ ಹೊರಳಾಡುವರು, ನೀನು ರಾಜಧರ್ಮವನ್ನು ಮರೆತಿಲ್ಲ ತಾನೆ, ಎಂದು ನಾರದರು ಯುಧಿಷ್ಠಿರನನ್ನು ಕೇಳಿದರು.
ಅರ್ಥ:
ನರಕ: ಅಧೋಲೋಕ; ಕರ್ಮ:ಕೆಲಸ; ಮಾಡಿ: ಆಚರಿಸಿ; ಇಹ: ಸಂಸಾರ, ಭೂಮಿ; ದುರಿತ: ಪಾಪ, ಪಾತಕ; ಭಾಜನ:ಭಾಗಿಸುವುದು; ಕಡೆ: ಅಂತ್ಯ; ಪರಕೆ: ಹರಕೆ; ಬಾಹಿರ: ಹೊರಗೆ; ನಾನಾ: ಬೇರೆಬೇರೆ; ಯೋನಿ:ಗರ್ಭಕೋಶ; ಸುಳಿದು:ಸುತ್ತು, ತಿರುಗು; ಹೊರಳು: ತೊಳಲಾಡು; ಕೆಲ: ಸ್ವಲ್ಪ; ಭೂಪ: ರಾಜ; ಧರಿಸು: ಹೊರು, ಹೊತ್ತುಕೊಳ್ಳು; ಹೊರಿಗೆ: ಭಾರ; ಮರೆ: ಮರೆತು, ಜ್ಞಾಪಕವಿಲ್ಲದ; ಭೂಪಾಲ; ರಾಜ;
ಪದವಿಂಗಡಣೆ:
ನರಕ +ಕರ್ಮವ +ಮಾಡಿ+ಇಹದೊಳು
ದುರಿತ +ಭಾಜನರಾಗಿ +ಕಡೆಯಲಿ
ಪರಕೆ +ಬಾಹಿರರಾಗಿ +ನಾನಾ+ಯೋನಿಯೊಳು +ಸುಳಿದು
ಹೊರಳುವರು+ ಕೆಲಕೆಲವು+ ಭೂಪರು
ಧರಿಸುವರಲೈ +ರಾಜಧರ್ಮದ
ಹೊರಿಗೆಯನು+ ಮರೆದಿರೆ+ಯಲಾ +ಭೂಪಾಲ+ ಕೇಳೆಂದ
ಅಚ್ಚರಿ:
(೧) ಕೆಲಕೆಲವು, ನಾನಾ – ಒಂದೆ ಪದ ೨ ಬಾರಿ ಪ್ರಯೋಗ
(೨) ಭಾಜನರಾಗಿ, ಬಾಹಿರರಾಗಿ – ಪದಪ್ರಯೋಗ