ಪದ್ಯ ೭೦: ಹಣದ ಮಹತ್ವವೇನು?

ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಲೈದದದರಿಂ
ಧನವೆ ಸಾಧನವರಸಿಗಾಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ (ಸಭಾ ಪರ್ವ, ೧ ಸಂಧಿ, ೭೦ ಪದ್ಯ)

ತಾತ್ಪರ್ಯ:
ಐಶ್ವರ್ಯ ಅಥವ ಹಣವಿದ್ದರೆ ಆಸ್ಥಾನ ವಿದ್ವಾಂಸರು, ಉತ್ತಮವಾದ ಕುದುರೆಗಳು, ಭೂಮಿ, ಗೌರವ, ರಾಣಿಯರು, ಸಮಸ್ತ ವಸ್ತುಗಳು ದೊರಕುತ್ತವೆ. ರಾಜನಿಗೆ ಹಣವೇ ಸಕಲ ಸಾಧನ, ಸಾಕಷ್ಟು ಹಣವಿದ್ದ ರಾಜನ ಎದುರಿಗೆ ಯಾರು ತಾನೆ ನಿಲ್ಲಬಲ್ಲರು.

ಅರ್ಥ:
ಧನ: ಐಶ್ವರ್ಯ, ಹಣ; ಪಂಡಿತ: ವಿದ್ವಾಂಸ; ಅಶ್ವ: ಕುದುರೆ; ತತಿ: ಗುಂಪು; ಧಾರುಣಿ: ಭೂಮಿ; ಮಾನ: ಗೌರವ; ಮೇಣ್: ಮತ್ತು; ಕಾಂತೆ: ಹೆಣ್ಣು; ಅಖಿಳ: ಸರ್ವ; ವಸ್ತು: ಪದಾರ್ಥ; ಸೇರು: ಮುಟ್ಟು, ಕೂಡು; ನೆನಹು: ಸ್ಮರಣೆ; ತೃಪ್ತಿ:ಸಮಾಧಾನ; ಸಾಧನ:ಸಾಧಿಸುವಿಕೆ; ಅರಸ: ರಾಜ; ಇದಿರು: ಅಭಿಮುಖ; ಧಾತ್ರಿಪತಿ: ರಾಜ; ಧಾತ್ರಿ: ಭೂಮಿ;

ಪದವಿಂಗಡಣೆ:
ಧನದಿ +ಪಂಡಿತರ್+ಅಶ್ವ+ತತಿ+ಯಾ
ಧನದಿ +ಧಾರುಣಿ +ಮಾನ +ಮೇಣ್+ಆ
ಧನದಿ +ಕಾಂತೆಯರ್+ಅಖಿಳ+ವಸ್ತುಗಳೈದೆ+ ಸೇರುವುದು
ನೆನಹು +ತೃಪ್ತಿಯೊಲ್+ಐದದ್+ಅದರಿಂ
ಧನವೆ+ ಸಾಧನವ್+ಅರಸಿಗ್+ಆ+ಧನವ್
ಅನಿತು +ದೊರಕೊಳಲ್+ಇದಿರದಾರೈ +ಧಾತ್ರಿ+ಪತಿಗಳಲಿ

ಅಚ್ಚರಿ:
(೧) ಧನದಿ – ೧-೩ ಮತ್ತು ೫ ಸಾಲಿನ ಮೊದಲ ಪದ
(೨) ಧಾರುಣಿ, ಧಾತ್ರಿ – ಭೂಮಿಯ ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ