ಪದ್ಯ ೫೨: ರಾಜ್ಯದ ಜನರಿಂದ ತೆರಿಗೆಯನ್ನು ಹೇಗೆ ಸಂಗ್ರಹಿಸಬೇಕು?

ಫಲವಹುದು ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಕೆಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕಾಯಿ ಹಣ್ಣಾಗುವುದನ್ನು ಹೂವಿನ ಸುವಾಸನೆಗೆ ತಪ್ಪಿಸಿಕೊಳ್ಳದ ದುಂಬಿಯಂತೆ, ನೀನು ಪ್ರಜೆಗಳನ್ನು ನೋಯಿಸದೆ ತೆರಿಗೆಯ ಹಣವನ್ನು ಸಂಗ್ರಹಿಸುತ್ತಿರುವೆಯಾ? ತಪ್ಪದ ಎಣಿಕೆ, ನೀತಿಗಳನ್ನು ಪ್ರಯೋಗಿಸಿ ರಾಜ್ಯವನ್ನು ಸುಭದ್ರವಾಗಿ ನಿಲಿಸುವ ಮಂತ್ರಿ ನಿನಗಿರುವರೆ, ಎಂದು ನಾರದರು ಕೇಳಿದರು.

ಅರ್ಥ:
ಫಲ: ಹಣ್ಣು; ಅಳಿ: ದುಂಬಿ; ಕೆಡಹು: ನಾಶಮಾಡು; ಪರಿಮಳ: ಸುವಾಸನೆ; ಕೊಂಬಂತೆ: ಕೊಂಡುಹೋಗುವಂತೆ; ಆಳ್ವಿಕೆ: ರಾಜ್ಯಭಾರ; ಕರ: ತೆರಿಗೆ; ಅರ್ಥ: ಹಣ; ತೆಗೆ: ತೆಗೆದುಕೊ; ಪ್ರಜೆ: ಜನ; ನೋವು: ವ್ಯಥೆ, ಬೇನೆ; ಹಲವು: ಬಹಳ; ಸನ್ಮಾನ:ಗೌರವ, ಮಾನ್ಯತೆ; ನಯ: ನುಣುಪು, ಮೃದುತ್ವ; ಚಲಿಸು: ಓಡಾಡು; ರಾಜ್ಯ: ರಾಷ್ಟ್ರ; ಅಭಿಮತ: ಅಭಿಪ್ರಾಯ; ಮಂತ್ರಿ: ಸಚಿವ; ರಾಯ: ರಾಜ;

ಪದವಿಂಗಡಣೆ:
ಫಲವಹುದು +ಕೆಡಲೀಯದ್+ಅಳಿ +ಪರಿ
ಮಳವ +ಕೊಂಬಂದದ್+ಅಲೆ+ ನೀನ್
ಆಳ್ವಿಕೆಯ +ಕರದ್+ಅರ್ಥವನು +ತೆಗೆವೈ +ಪ್ರಜೆಯ +ನೋಯಿಸದೆ
ಹಲವು +ಸನ್ಮಾನದಲಿ +ನಯದಲಿ
ಚಲಿಸದ್+ಇಪ್ಪಂದದಲಿ ರಾಜ್ಯವ
ನಿಲಿಸುವಭಿಮತ +ಮಂತ್ರಿಯುಂಟೇ +ರಾಯ +ನಿನಗೆಂದ

ಅಚ್ಚರಿ:
(೧) ಕಾಯಿ ಹಣ್ಣಾಗುವಿಕೆ, ದುಂಬಿ ಪುಷ್ಪದ ರಸವನ್ನು ಹೀರುವಿಕೆ – ಉಪಮಾನಗಳ ಪ್ರಯೋಗ
(೨) ಮಂತ್ರಿಯ ಲಕ್ಷಣ: ಸನ್ಮಾನ, ನಯ

ನಿಮ್ಮ ಟಿಪ್ಪಣಿ ಬರೆಯಿರಿ