ಪದ್ಯ ೪೮: ಯಾವುದರಿಂದ ಪಾಪವನ್ನು ಅನುಭವಿಸಬಾರದು?

ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಘಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನ್ಯಾಯವಿಲ್ಲದ ನಡವಳಿಯಲ
ನ್ಯಾಯ ಹೊದ್ದುವ ಪಾಪವನು ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಆದಾಯವಿಲ್ಲದ ವ್ಯಯವನ್ನು, ಪೂರ್ಣವಾಗಿಲ್ಲದ ಹೊಡೆತವನ್ನು, ನಿಶ್ಚಯ ದೃಢತೆಗಳಿಲ್ಲದ ಮಂತ್ರಾಲೋಚನೆಗಳನ್ನು ಮಾಡಿ, ನಡತೆಯಲ್ಲಿ ನ್ಯಾಯವಿಲ್ಲದೆ, ಅನ್ಯಾಯದಿಂದ ಪಾಪವನ್ನು ಮಾಡಿ ಅದರ ಫಲವನ್ನು ನೀನು ಅನುಭವಿಸುವುದಿಲ್ಲ ತಾನೆ?

ಅರ್ಥ:
ಆಯ: ಆದಾಯ; ಬೀಯ:ವ್ಯಯ; ಪೂರ: ಪೂರ್ಣ; ಘಾಯ:ನೋವು; ನಿರ್ದಾಯ: ಅಖಂಡ; ಮಂತ್ರ: ವಿಚಾರ, ಆಲೋಚನೆ; ಲೇಸು: ಒಳ್ಳೆಯದು; ರಚಿಸು: ನಿರ್ಮಿಸು; ನ್ಯಾಯ: ನೀತಿಬದ್ದವಾದ; ನಡವಳಿ: ನಡತೆ; ಅನ್ಯಾಯ: ನ್ಯಾಯಸಮ್ಮತವಲ್ಲದ; ಪಾಪ:ಕೆಟ್ಟ ಕೆಲಸ; ಕಾಯ: ಶರೀರ; ಧರಿಸು: ಹೊರು; ಭೂಪಾಲ: ರಾಜ;

ಪದವಿಂಗಡಣೆ:
ಆಯವಿಲ್ಲದ +ಬೀಯವನು +ಪೂ
ರಾಯ+ವಿಲ್ಲದ +ಘಾಯವನು +ನಿ
ರ್ದಾಯವಿಲ್ಲದ+ ಮಂತ್ರವನು +ಲೇಸಾಗಿ +ಮಿಗೆ +ರಚಿಸಿ
ನ್ಯಾಯವಿಲ್ಲದ +ನಡವಳಿಯಲ್
ಅನ್ಯಾಯ +ಹೊದ್ದುವ +ಪಾಪವನು +ನಿಜ
ಕಾಯದಲಿ +ನೀ+ ಧರಿಸೆಯೆಲೆ +ಭೂಪಾಲ +ಕೇಳೆಂದ

ಅಚ್ಚರಿ:
(೧) ಆಯ, ಪೂರಾಯ, ನಿರ್ದಾಯ, ನ್ಯಾಯ, ಕಾಯ – ಯ ಕಾರದಿಂದ ಕೊನೆಗೊಳ್ಳುವ ಪದಗಳು
(೨) ನ್ಯಾಯ – ೪, ೫ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ