ಪದ್ಯ ೨೨: ಆ ಮಹಾಸಭೆಯಲ್ಲಿ ಯುಧಿಷ್ಠಿರನು ಯಾವ ತೇಜಸ್ಸನ್ನು ಕಂಡನು?

ಆ ಮಹಾಸಭೆಯಲಿ ಯುಧಿಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸದಳ ನಯನ ಸಂನಿಭ ಭಾವಭಾವಿತನ
ಹಾಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾದೆಸೆಯ (ಸಭಾ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅತ್ಯಾಕರ್ಷವಾದ ಆ ಮಹಾಸಭೆಯಲಿ ಯುಧಿಷ್ಠಿರನು ದೂರದಲ್ಲಿ ಕಮಲದಂತ ನಯನಗಳುಳ್ಳ ಶ್ರೀ ಮಹಾವಿಷ್ಣುವಿಗೆ ಸದೃಶವಾಗಿ ಅವನ ಭಾವದಲ್ಲೇ ಇರುವ ನಾರದರನ್ನು ಕಂಡನು. ಇಬ್ಬರು ಸೂರ್ಯರ ತೇಜಸ್ಸು ಒಂದೇ ಕಡೆಯಿಂದ ಬರುತ್ತಿದೆಯಲಾ! ಯಾವ ಮೂಲದಿಂದ ಈ ತೇಜಸ್ಸು ಬರುತ್ತಿದೆ ಎಂದು ಆ ಕಡೆಗೆ ತಿರುಗಿ ನೋಡಿದನು.

ಅರ್ಥ:
ಸಭೆ: ದರ್ಬಾರು; ಮಹಾ: ಶ್ರೇಷ್ಠ, ದೊಡ್ಡ; ಭೂಮಿಪತಿ: ರಾಜ; ದೂರ: ಬಹಳ ಅಂತರ, ಸಮೀಪವಲ್ಲದ; ಕಂಡು: ನೋಡು; ತಾಮರಸ: ಕಮಲ; ನಯನ: ಕಣ್ಣು; ಸನ್ನಿಭ: ಸದೃಶ, ಸಮಾನವಾದ; ಭಾವಿತ: ಆಲೋಚಿಸಿದ; ಎತ್ತಣ: ಎಲ್ಲಿಂದ; ಅದುಭುತ: ಅತ್ಯಾಶ್ಚರ್ಯಕರವಾದ; ಧಾಮ: ಕಿರಣ, ರಶ್ಮಿ; ದಿನಮಣಿ: ಸೂರ್ಯ; ತೇಜ: ಹೊಳಪು, ಕಾಂತಿ; ಸ್ತೋಮ: ಗುಂಪು; ಧಾತು:ಮೂಲ ವಸ್ತು; ಈಕ್ಷಿಸು: ನೋಡು; ದೆಸೆ: ದಿಕ್ಕು;

ಪದವಿಂಗಡಣೆ:
ಆ +ಮಹಾಸಭೆಯಲಿ +ಯುಧಿಷ್ಠಿರ
ಭೂಮಿಪತಿ+ ದೂರದಲಿ+ ಕಂಡನು
ತಾಮರಸದಳ+ ನಯನ+ ಸಂನಿಭ+ ಭಾವ+ಭಾವಿತನ
ಹಾ+ಮಹಾದೇವ+ಎತ್ತಣ+ಅದುಭುತ
ಧಾಮವಿದು+ ದಿನಮಣಿಯ+ ತೇಜ
ಸ್ತೋಮವ್+ಎರಡರ +ಧಾತು+ಯೆನುತ್+ಈಕ್ಷಿಸಿದರ್+ಆ+ದೆಸೆಯ

ಅಚ್ಚರಿ:
(೧) ಆ, ಹಾ – ೧, ೪ ಸಾಲಿನ ಮೊದಲ ಪದ
(೨) ಕಂಡನು, ಈಕ್ಷಿಸಿದರ್ – ನೋಡಿದನು ಪದದ ಸಮನಾರ್ಥಕ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ