ಪದ್ಯ ೧೩: ಪಾಂಡವರ ಸಭಾಮಂಟಪವನ್ನು ಯಾರು ರಚಿಸಿದರು?

ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗವ ಕೃತಜ್ಞನಲೆ
ಕಿರಣಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವ ಶಿವಾಯೆನೆ ಮೆರೆದುದಾಸ್ಥಾನ (ಸಭಾಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನ ನಿಯಮದಂತೆ ಖಾಂಡವವ ವನದ ದಹನದಲ್ಲಿ ಉಳಿದ ಮಯನು ಪಾಂಡವರಿಗಾಗಿ ಹದಿನಾಲ್ಕು ತಿಂಗಳಲ್ಲಿ ಒಂದು ಭವ್ಯವಾದ ಆಸ್ಥಾನ ಮಂಟಪವನ್ನು ನಿರ್ಮಿಸಿದನು. ವಿವಿಧ ರತ್ನಗಳ ಕಿರಣ ಸಮೂಹದಿಂದ ಹೊಳೆಯುತ್ತಿದ್ದ ಆ ಮಂಟಪವು ದೇವತೆಗಳಿಂದಲೂ ರಚಿಸಲಸಾಧ್ಯ ಎಂಬಂತಿತ್ತು.

ಅರ್ಥ:
ಮುರಹರ: ಕೃಷ್ಣ; ನೇಮ: ನಿಯಮ; ವಿಸ್ತರ: ವ್ಯಾಪ್ತಿ; ಪದಿನಾಲ್ಕು: ಹದಿನಾಲ್ಕು; ತಿಂಗಳು: ಮಾಸ; ವರ: ಶ್ರೇಷ್ಠ; ಮಂಟಪ: ಸಭಾಸ್ಥಾನ; ಅನಿಬರು: ಎಲ್ಲರು; ಕೃತಜ್ಞ:ಉಪಕಾರ ನೆನೆಯುವುದು; ಕಿರಣ:ಕಾಂತಿ; ಲಹರಿ: ಮನಸ್ಸಿನ ಒಲವು, ತೆರೆ; ವಿವಿಧ: ಹಲವಾರು; ರತ್ನ: ಮಾಣಿಕ್ಯ; ಉತ್ಕರ: ಸಮೂಹ; ರಚನ:ಮಾಡು, ಕ್ರಿಯೆ; ಶಿಲ್ಪ: ಲಲಿತಕಲೆ, ಕುಶಲವಿದ್ಯೆ; ದೇವರು: ಭಗವಂತ; ಅಸಾಧ್ಯ: ಮಾಡಲಾಗದ ಕಾರ್ಯ; ಮೆರೆ: ವಿಜೃಂಭಿಸು; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಮುರಹರನ +ನೇಮದಲಿ +ಮಯ +ವಿ
ಸ್ತರಿಸಿದನು +ಪದಿನಾಲ್ಕು +ತಿಂಗಳು
ವರ+ ಸಭಾಮಂಟಪವನ್+ಅನಿಬರಿಗ್+ಅವ+ ಕೃತಜ್ಞನಲೆ
ಕಿರಣ+ಲಹರಿಯ +ವಿವಿಧ +ರತ್ನೋ
ತ್ಕರದ +ರಚನಾಶಿಲ್ಪವಿದು +ದೇ
ವರಿಗ್+ಅಸಾಧ್ಯವು +ಶಿವ +ಶಿವಾಯೆನೆ+ ಮೆರೆದುದಾಸ್ಥಾನ

ಅಚರಿ:
(೧) ಮಂಟಪದ ಸೌಂದರ್ಯದ ವರ್ಣನೆ: ಕಿರಣಲಹರಿಯ ವಿವಿಧ ರತ್ನೋತ್ಕರದ ರಚನಾಶಿಲ್ಪವಿದು, ದೇವರಿಗಸಾಧ್ಯವು

ನಿಮ್ಮ ಟಿಪ್ಪಣಿ ಬರೆಯಿರಿ