ಪದ್ಯ ೮೧: ಕುಂತಿಯ ವಿವೇಕ ನುಡಿಗಳು ಗಾಂಧಾರಿಯ ಮನಸ್ಸನ್ನು ಬದಲಿಸಿತೆ?

ಕೇಳಿದಳು ಗಾಂಧಾರಿ ಕುಂತೀ
ಲೋಲಲೋಚನೆ ನುಡಿದ ನುಡಿಗಳ
ನೇಳಿದವ ಮಾಡಿದಪೆ ಐರಾವತದ ನೋಂಪಿಯಲಿ
ಬಾಲೆ ನಿನ್ನನು ಕರೆಸ ಮರೆದುದು
ಖೂಳತನವಾಯ್ತೆನುತ ದುಗುಡವ
ತಾಳಿ ಬಾರೆನು ತಂಗಿ ನೀ ಹೋಗೆಂದಳಿಂದುಮುಖಿ (ಆದಿ ಪರ್ವ, ೨೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ಕುಂತಿಯ ವಿವೇಕಯುಕ್ತ ಮಾತುಗಳನ್ನು ಗಾಂಧಾರಿ ಕೇಳಿದಳು ಆದರೆ ಗಾಂಧಾರಿಗೆ ಕುಂತಿಯು ತನಗೆ ಅಪಹಾಸ್ಯಮಾದುತ್ತಿದ್ದಾಳೆ ಎಂದೆ ಗೋಚರಿಸಿತು, ಹಿಂದೆ ತಾನು ಮಾಡಿದ ಐರಾವತ ವ್ರತಕ್ಕೆ ಕುಂತಿಯನ್ನು ಆಹ್ವಾನಿಸದ್ದು ಬಹಳ ದೊಡ್ಡ ತಪ್ಪಾಯಿತು, ಎಂದು ಆಕೆ ದುಃಖಭರಿತಳಾಗಿ, ಕುಂತಿ ನೀನು ಹೋಗು ನಾನು ಬರುವುದಿಲ್ಲ ಎಂದು ಹೇಳಿದಳು.

ಅರ್ಥ:
ಕೇಳು: ಆಲಿಸು; ಲೋಲ: ಅತ್ತಿತ್ತ ಅಲುಗಾಡುವ, ಪ್ರೀತಿ; ಲೋಚನ: ಕಣ್ಣು; ನುಡಿ: ಮಾತಾಡು; ನುಡಿ: ಮಾತು; ಏಳಿದ: ಅವಮಾನ, ತಿರಸ್ಕಾರ; ಮಾಡು: ಆಚರಿಸು, ನಿರ್ವಹಿಸು; ನೋಂಪು: ವ್ರತ; ಬಾಲೆ: ಹುಡುಗಿ; ಕರೆ: ಆಮಂತ್ರಿಸು; ಮರೆ: ಜ್ಞಾಪಕಕ್ಕೆ ಇಲ್ಲದಿರುವ; ಖೂಳ:ದುರುಳ, ದುಷ್ಟ; ದುಗುಡ: ದುಃಖ; ತಾಳಿ: ಧರಿಸು; ತಂಗಿ: ಸೋದರಿ;ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಕೇಳಿದಳು +ಗಾಂಧಾರಿ +ಕುಂತೀ
ಲೋಲ+ಲೋಚನೆ +ನುಡಿದ +ನುಡಿಗಳನ್
ಏಳಿದವ+ ಮಾಡಿದಪೆ+ ಐರಾವತದ+ ನೋಂಪಿಯಲಿ
ಬಾಲೆ +ನಿನ್ನನು +ಕರೆಸ +ಮರೆದುದು
ಖೂಳತನವಾಯ್ತ್+ಎನುತ +ದುಗುಡವ
ತಾಳಿ +ಬಾರೆನು +ತಂಗಿ +ನೀ +ಹೋಗೆಂದಳ್+ಇಂದುಮುಖಿ

ಅಚ್ಚರಿ:
(೧) ನುಡಿದ ನುಡಿಗಳ ನೇಳಿದಳು – “ನ” ಕಾರದ ತ್ರಿವಳಿ ಪದ
(೨) ಗಾಂಧಾರಿಯ ಕೋಪ ಕಡಿಮೆಯಾಯಿತೆಂದು ತೋರುವ ಪದಗಳು – ಕುಂತಿಯನ್ನು ಸಂಭೋದಿಸುವ ಬಗೆ, ಬಾಲೆ, ತಂಗಿ

ನಿಮ್ಮ ಟಿಪ್ಪಣಿ ಬರೆಯಿರಿ