ಪದ್ಯ ೫೧: ಅಗ್ನಿಯ ಆಹುತಿಗೆ ಯಾವ ಪ್ರಾಣಿಗಳು ಬಲಿಯಾದವು?

ಧರಣಿಪತಿ ಕೇಳ್ ಶರಭ ಮೃಗಪತಿ
ಕರಿಕಳಭ ಶಾರ್ದೂಲ ಸೂಕರ
ಕರಡಿ ಕಾಸರಶಲ ಮೃಗಾದನ ಖಡ್ಗ ಗೋಮಾಯು
ಎರಳೆ ಮೊಲ ಸಾರಂಗ ವಾನರ
ನುರು ಕುರಂಗ ಪ್ರಮುಖ ಮೃಗಕುಲ
ವುರುಬಿ ಬಿದ್ದುದು ದಳ್ಳುರಿಯ ಬೆಳ್ಳರವಲೆಗಳಲಿ (ಆದಿ ಪರ್ವ, ೨೦ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಗ್ನಿಯ ಆಹುತಿಗೆ ಕಾಡಿನೊಳಗಿದ್ದ ಶರಭ, ಸಿಂಹ, ಆನೆ, ಆನೆಯಮರಿ, ಹುಲಿ, ಹಂದಿ, ಕರಡಿ, ಕಾಡುಕೋಣ, ಮುಳ್ಳುಹಂದಿ, ಕತ್ತೆಕಿರುಬ, ಖಡ್ಗಮೃಗ, ನರಿ, ಜಿಂಕೆ, ಮೊಲ, ಸಾರಂಗ, ಕಪಿ, ಜಿಂಕೆ ಮೊದಲಾದ ಪ್ರಾಣಿಗಳು ಆಹುತಿಯಾದವು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಶರಭ:ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ; ಮೃಗ: ಪ್ರಾಣಿ; ಮೃಗಪತಿ: ಸಿಂಹ; ಕರಿ: ಆನೆ; ಕರಿಕ: ಕರಿ ಬಣ್ಣದವನು; ಕರಿಕಳಭ: ಆನೆಮರಿ; ಶಾರ್ದೂಲ:ಹುಲಿ, ವ್ಯಾಘ್ರ; ಸೂಕರ:ಹಂದಿ, ವರಾಹ; ಕಾಸರ:ಕಾಡುಕೋಣ; ಶಲ: ಮುಳ್ಳುಹಂದಿಯ ಮೈಮೇಲಿರುವ ಮುಳ್ಳು; ಗೋಮಾಯು: ನರಿ; ಖಡ್ಗ: ಘೇಂಡಾಮೃಗ; ಎರಳೆ:ಜಿಂಕೆ; ಮೊಲ: ಶಶ; ಸಾರಂಗ: ಜಿಂಕೆ; ವಾನರ: ಕೋತಿ; ನುರು: ; ಕುರಂಗ: ಜಿಂಕೆ; ಪ್ರಮುಖ: ಮುಖ್ಯವಾದ; ಮೃಗಕುಲ: ಪ್ರಾಣಿಗಳ ವಂಶ; ದಳ್ಳುರಿ: ಬೆಂಕಿ; ಬೆಳ್ಳಾರ: ಒಂದು ಬಗೆಯ ಬಲೆ;

ಪದವಿಂಗಡಣೆ:
ಧರಣಿಪತಿ +ಕೇಳ್ +ಶರಭ +ಮೃಗಪತಿ
ಕರಿಕಳಭ+ ಶಾರ್ದೂಲ +ಸೂಕರ
ಕರಡಿ +ಕಾಸರ+ಶಲ+ ಮೃಗಾದನ+ ಖಡ್ಗ +ಗೋಮಾಯು
ಎರಳೆ +ಮೊಲ +ಸಾರಂಗ +ವಾನರ
ನುರು +ಕುರಂಗ +ಪ್ರಮುಖ +ಮೃಗಕುಲ
ವುರುಬಿ+ ಬಿದ್ದುದು +ದಳ್ಳುರಿಯ +ಬೆಳ್ಳರ+ವಲೆಗಳಲಿ

ಅಚ್ಚರಿ:
(೧) ೧೭ ಬಗೆಯ ಪ್ರಾಣಿಗಳ ಹೆಸರನ್ನು ವಿವರಿಸಿದ್ದು

ನಿಮ್ಮ ಟಿಪ್ಪಣಿ ಬರೆಯಿರಿ