ಪದ್ಯ ೩೧: ಬಲರಾಮನು ಅರ್ಜುನನನ್ನು ಅರಮನೆಗೆ ಬರಲು ಹೇಗೆ ಒಪ್ಪಿಸಿದನು?

ಅಹುದು ನೀವೇಕಾಂತ ಭವನದೊ
ಳಿಹುದು ಚಾತುರ್ಮಾಸವಿದು ಸಂ
ನಿಹಿತವಾಯ್ತದ ನೂಕಿ ಬಿಜಯಂಗೈವುದಿಚ್ಛೆಯಲಿ
ವಿಹಿತ ಚರಿತರು ನೀವಲಾ ನಿ
ರ್ವಹಿಸುವೆನು ಶುಶ್ರೂಷೆಯನು ಕಿಂ
ಹಗನ ಮಾಡದಿರೆಂದು ತಂದನು ಯತಿಯನರಮನೆಗೆ (ಆದಿ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯತಿಯ ವೇಷದಲ್ಲಿದ್ದ ಅರ್ಜುನನು ಅರಮನೆಗೆ ನಾನ್ಯಾಕೆ ಬರಲಿ, ನಾನೊಬ್ಬ ಸನ್ಯಾಸಿ ಎಂದು ಹೇಳಲು, ಬಲರಾಮ ಇವನ ಪಾಂಡಿತ್ಯಕ್ಕೆ ಮಾರುಹೋಗಿ, ನೀವು ಹೇಳುವುದು ನಿಜ, ಆದರೆ ಇನ್ನು ಸ್ವಲ್ಪ ದಿನಗಳಲ್ಲಿ ಚಾತುರ್ಮಾಸವು ಶುರುವಾಗುತ್ತದೆ, ಅದನ್ನು ಮುಗಿಸಿಕೊಂಡು ನೀವು ಹೊರಡಬಹುದು, ನೀವು ಉತ್ತಮಚರಿತರು, ನಿಮಗೆ ಸರಿಯಾದ ಶುಶ್ರೂಷೆಯನ್ನು ಏರ್ಪಡಿಸುತ್ತೇನೆ, ಇದನ್ನೆ ಒಂದು ದೊಡ್ಡ ಪ್ರಶ್ನೆಯನ್ನಾಗಿ ಮಾಡಬೇಡಿ, ಎಂದು ಹೇಳಿ ಬಲರಾಮನು ಅರ್ಜುನನನ್ನು ಮನೆಗೆ ಕರೆತಂದನು.

ಅರ್ಥ:
ಏಕಾಂತ: ಒಂಟಿ; ಭವನ: ಮನೆ; ಇಹುದು: ವಾಸ್ತವ್ಯ; ಮಾಸ: ತಿಂಗಳು; ಸಂನಿಹಿತ: ಹತ್ತಿರ; ನೂಕಿ: ತಳ್ಳಿ; ಬಿಜಯಂಗೈವುದು: ಹೊರಡುವುದು; ಇಚ್ಛೆ: ಆಸೆ; ವಿಹಿತ: ಯೋಗ್ಯ; ಚರಿತರು: ನಡವಳಿಕೆ; ನಿರ್ವಹಿಸು:ಮಾಡು; ಶುಶ್ರೂಷೆ: ಉಪಚಾರ, ಸೇವೆ; ಕಿಂಗಹನ: ಏನುಮಹಾಕಷ್ಟ; ಯತಿ: ಋಷಿ; ಅರಮನೆ: ರಾಜರ ನಿವಾಸ;

ಪದವಿಂಗಡಣೆ:
ಅಹುದು +ನೀವ್+ಏಕಾಂತ +ಭವನದೊಳ್
ಇಹುದು +ಚಾತುರ್ಮಾಸವಿದು +ಸಂ
ನಿಹಿತವಾಯ್ತ್+ಅದ+ ನೂಕಿ +ಬಿಜಯಂಗೈವುದ್+ಇಚ್ಛೆಯಲಿ
ವಿಹಿತ+ ಚರಿತರು +ನೀವಲಾ +ನಿ
ರ್ವಹಿಸುವೆನು +ಶುಶ್ರೂಷೆಯನು +ಕಿಂ
ಹಗನ +ಮಾಡದಿರೆಂದು +ತಂದನು+ ಯತಿಯನ್+ಅರಮನೆಗೆ

ಅಚ್ಚರಿ:
(೧) ಅಹುದು, ಇಹುದು – ೧, ೨ ಸಾಲಿನ ಮೊದಲನೆ ಪದ
(೨) ಭವನ, ಅರಮನೆ – ಸಮನಾರ್ಥಕ ಪದ
(೩) ಕಿಂಗಹನ – ಸ್ವಲ್ಪ ಅಧಿಕಾರದಿಂದ ಹೇಳಿರುವ ಪದ, ಏನುಮಹಾಕಷ್ಟ

ನಿಮ್ಮ ಟಿಪ್ಪಣಿ ಬರೆಯಿರಿ