ಪದ್ಯ ೨೨: ಅರ್ಜುನನು ಯಾವ ಯೋಚನೆಯೊಂದಿಗೆ ದ್ವಾರಕಿಗೆ ಬಂದನು?

ಪುರವ ಹೊರವಂಟೆಂಟು ತಿಂಗಳು
ಪರಿಹರಿಸಿತೀ ಕೃಷ್ಣರಾಯನ
ಪುರದೊಳಗೆ ನೂಕುವೆನು ವರ್ಷಾಕಾಲ ವಿಭ್ರಮವ
ವರುಷವೊಂದು ಸಮಾಪ್ತಿ ಬಳಿಕಿನೊ
ಳರಸನಂಘ್ರಿವಿಲೋಕನಾ ವಿ
ಸ್ತರಣವಹುದೆಂದಾತ ನಿಶ್ಚೈಸಿದನು ಮನದೊಳಗೆ (ಆದಿ ಪರ್ವ, ೧೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ದ್ವಾರಕಿಯ ದಾರಿಯಲ್ಲಿ ಅರ್ಜುನನ ಮನದಾಳದ ಮಾತು ಹೀಗಿತ್ತು, ಊರನ್ನು ಬಿಟ್ಟು ಎಂಟು ತಿಂಗಳುಗಳಾದವು, ಇನ್ನು ಈ ಮಳೆಗಾಲವನ್ನು ದ್ವಾರಕಿಯಲ್ಲಿ ಕಳೆದರೆ ವರ್ಷ ಮುಗಿಯುತ್ತದೆ, ನಂತರ ನಮ್ಮಣ್ಣನ ಪಾದದರ್ಶನ ಮಾಡುತ್ತೇನೆ.

ಅರ್ಥ:
ಪುರ: ಊರು; ಹೊರವಂಟು: ಬಿಟ್ಟು; ತಿಂಗಳು: ಮಾಸ; ಪರಿಹರಿಸು: ನಿವಾರಿಸು; ನೂಕು:ತಳ್ಳು; ವರ್ಷ: ಮಳೆ; ವಿಭ್ರಮ:ಸುತ್ತಾಟ, ಅಲೆದಾಟ; ವರುಷ: ಸಂವತ್ಸರ; ಸಮಾಪ್ತಿ: ಮುಕ್ತಾಯ; ಬಳಿಕ: ನಂತರ; ಅರಸ: ರಾಜ; ಅಂಘ್ರಿ: ಪಾದ; ವಿಲೋಕನ: ನೋಟ, ದೃಷ್ಟಿ; ವಿಸ್ತರಣ: ಹಬ್ಬಿದುದು; ನಿಶ್ಚೈಸು: ನಿರ್ಧರಿಸು; ಮನ: ಮನಸ್ಸು;

ಪದವಿಂಗಡಣೆ:
ಪುರವ +ಹೊರವಂಟ್+ಎಂಟು +ತಿಂಗಳು
ಪರಿಹರಿಸಿತ್+ಈ+ ಕೃಷ್ಣ+ರಾಯನ
ಪುರದೊಳಗೆ +ನೂಕುವೆನು +ವರ್ಷಾ+ಕಾಲ+ ವಿಭ್ರಮವ
ವರುಷವೊಂದು +ಸಮಾಪ್ತಿ +ಬಳಿಕಿನೊಳ್
ಅರಸನ್+ಅಂಘ್ರಿ+ವಿಲೋಕನಾ +ವಿ
ಸ್ತರಣ+ವಹುದ್+ಎಂದಾತ+ ನಿಶ್ಚೈಸಿದನು +ಮನದೊಳಗೆ

ಅಚ್ಚರಿ:
(೧) ಪುರ: ೧,೩ ಸಾಲಿನ ಮೊದಲ ಪದ
(೨) ರಾಯ, ಅರಸ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ