ಪದ್ಯ ೧೨: ಪಾಂಡವರ ವೈಭವ ಹೇಗಿತ್ತು?

ವಿತತ ವಿಭವದಲಿಂದ್ರನಮರಾ
ವತಿಯ ಹೊಗುವಂದದಲಿ ದ್ರುಪದಾ
ಚ್ಯುತರು ಸಹಿತವನೀಶ ಹೊಕ್ಕನು ರಾಜಮಂದಿರವ
ಕೃತಯುಗದಲಾ ತ್ರೇತೆಯಲಿ ಭೂ
ಪತಿಗಳಾದರನಂತ ಕುಂತೀ
ಸುತರ ಸಿರಿಗೆಣೆಯಾದುದಿಲ್ಲವನೀಶ ಕೇಳೆಂದ (ಆದಿ ಪರ್ವ, ೧೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಮಹಾವೈಭವದಿಂದ ಇಂದ್ರನು ಅಮರಾವತಿಯನ್ನು ಪ್ರವೇಶಿಸುವಂತೆ, ಧರ್ಮಜನು ದ್ರುಪದ, ಕೃಷ್ಣರೊಡನೆ ಇಂದ್ರಪ್ರಸ್ಥದ ಅರಮನೆಯನ್ನು ಹೊಕ್ಕನು. ಕೃತ, ತ್ರೇತಾಯುಗಗಳಲ್ಲಿ ಲೆಕ್ಕವಿಲ್ಲದಷ್ಟು ರಾಜರಿದ್ದರು, ಆದರೆ ಅವರಾರ ವೈಭವವು ಪಾಂಡವರ ವೈಭವಕ್ಕೆ ಸರಿಸಾಟಿಯಲ್ಲ.

ಅರ್ಥ:
ವಿತತ:ವಿಸ್ತಾರವಾದ, ಶ್ರೇಷ್ಠವಾದ; ವಿಭವ: ವೈಭವ, ಸಿರಿ, ತೋರಿಕೆ; ಇಂದ್ರ: ದೇವೆಂದ್ರ; ಹೊಗು: ಪ್ರವೇಶಿಸು; ಅಚ್ಯುತ: ಕೃಷ್ಣ; ಸಹಿತ: ಜೊತೆ; ಅವನೀಶ: ರಾಜ; ಹೊಕ್ಕನು: ಸೇರಿದನು; ರಾಜ: ನೃಪ; ರಾಜಮಂದಿರ: ಅರಮನೆ; ಯುಗ: ದೀರ್ಘವಾದ ಕಾಲದಂಡ; ಭೂಪತಿ: ರಾಜ; ಆದರ:ಗೌರವ; ಸುತ: ಮಗ; ಸಿರಿ: ಸಂಪತ್ತು, ಐಶ್ವರ್ಯ; ಎಣೆ:ಸಮ, ಸಾಟಿ;

ಪದವಿಂಗಡಣೆ:
ವಿತತ +ವಿಭವದಲ್+ಇಂದ್ರನ್+ಅಮರಾ
ವತಿಯ+ ಹೊಗುವಂದದಲಿ+ ದ್ರುಪದ
ಅಚ್ಯುತರು +ಸಹಿತ್+ಅವನೀಶ+ ಹೊಕ್ಕನು +ರಾಜಮಂದಿರವ
ಕೃತಯುಗದಲಾ+ ತ್ರೇತೆಯಲಿ+ ಭೂ
ಪತಿಗಳ್+ಆದರನಂತ+ ಕುಂತೀ
ಸುತರ +ಸಿರಿಗ್+ಎಣೆ+ಯಾದುದ್+ಇಲ್ಲ+ಅವನೀಶ+ ಕೇಳೆಂದ

ಅಚ್ಚರಿ:
(೧) ಅವನೀಶ – ೨ ಬಾರಿ ಪ್ರಯೋಗ, ಒಂದು ಧರ್ಮರಾಜನನ್ನು ಮತ್ತೊಂದು ಜನಮೇಜಯನನ್ನು ಕರೆಯಲು
(೨) ವಿಭವ, ಸಿರಿ – ಸಮಾನ ಅರ್ಥಕೊಡುವ ಪದ

ನಿಮ್ಮ ಟಿಪ್ಪಣಿ ಬರೆಯಿರಿ