ಪದ್ಯ ೨೭: ದ್ರೋಣನು ಪರಶುರಾಮರಿಂದ ಎನನ್ನು ಪಡೆದನು?

ಧನರಹಿತ ನಾ ಹೊತ್ತ ಭಾರಿಯ
ಧನುವಿದೊಂದಿದೆ ದಿವ್ಯಶರವಿದೆ
ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ
ಎನಗೆ ನಿಮ್ಮಡಿಗಳ ಕೃಪಾಲೋ
ಕನವಲೇ ಪರಿಯಾಪ್ತಿ ಲೋಕದ
ಜನ ಮನೋರಂಜನವೆ ಬೇಹುದು ಶರವ ಕೊಡಿಯೆಂದ (ಆದಿ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರೆ, ಧನ ಎರಡು ಇಲ್ಲದೆ ಪರಮಮುನಿಗಳಾದ ದ್ರೋಣರಿಗೆ ಆತಿಥ್ಯ ಮಾಡಲು ಅಭಾಗ್ಯ ಎಂದು ಬೇಸರ ಪಟ್ಟ ಪರಶುರಾಮರು, ಧನ ವಿಲ್ಲದಿದ್ದರೂ, ನನ್ನ ಬಳಿ ಮಹತ್ತರವಾದ ಧನು ಮತ್ತು ದಿವ್ಯಶಕ್ತಿಯುಳ್ಳ ಬಾಣ ಗಳಿದೆ. ನಿನ್ನ ಮನಸ್ಸಿಗೆ ಯಾವುದು ಇಷ್ಟವೋ ಅದನ್ನು ಕೇಳು ಎಂದು ಹೇಳಲು, ದ್ರೋಣರು ನಸುನಕ್ಕು ಅತ್ಯಂತ ವಿನಮ್ರದಿಂದ ನನಗೆ ನಿಮ್ಮ ಕೃಪಾದೃಷ್ಟಿಯೆ ಸಾಕು. ಲೋಕದ ಜನರ ಮೆಚ್ಚುಗೆಗಾಗಿ ನನಗೆ ಆ ದಿವ್ಯಾಸ್ತ್ರವನ್ನು ಕೊಡಿ ಎಂದನು.

ಅರ್ಥ:
ಧನ: ಸಂಪತ್ತು, ಹಣ; ರಹಿತ: ಇಲ್ಲದಿರುವಿಕೆ; ಹೊತ್ತ: ಉಂಟಾಗು;
ಭಾರಿ: ತುಂಬಾ, ಮಹತ್ತರ; ಧನು: ಬಿಲ್ಲು; ದಿವ್ಯ: ಶ್ರೇಷ್ಠ; ಉತ್ತಮ;
ಶರ: ಬಾಣ; ಮನ: ಮನಸ್ಸು; ವರಿಸು: ಆರಿಸು, ಒಪ್ಪಿಕೊಳ್ಳು; ನಸು: ಸ್ವಲ್ಪ; ನಗು: ಮುಗುಳ್ನಗೆ
ಕೃಪ: ಕರುಣಾ; ಪರಿಯಾಪ್ತಿ: ಕೊನೆ; ಲೋಕ: ಜಗತ್ತು
ಜನ: ಮನುಷ್ಯರು; ಮನೋರಂಜನೆ: ಕುಷಿ, ಸಂತೋಷ; ಬೇಹುದು: ಬೇಕು
ಕೊಡಿ: ದಯಪಾಲಿಸಿ, ನೀಡಿ; ಲೋಕನ: ದೃಷ್ಟಿ

ಪದವಿಂಗಡನೆ:
ಧನರಹಿತ +ನಾ +ಹೊತ್ತ +ಭಾರಿಯ
ಧನುವಿದ್+ಒಂದಿದೆ +ದಿವ್ಯ+ಶರವಿದೆ
ಮನಕೆ+ ಬಂದುದ +ವರಿಸು +ನೀನ್+ಎನೆ +ದ್ರೋಣ +ನಸುನಗುತ
ಎನಗೆ +ನಿಮ್ಮಡಿಗಳ+ ಕೃಪಾಲೋ
ಕನವಲೇ +ಪರಿಯಾಪ್ತಿ +ಲೋಕದ
ಜನ +ಮನೋರಂಜನವೆ +ಬೇಹುದು+ ಶರವ +ಕೊಡಿಯೆಂದ

ಅಚ್ಚರಿ:
(೧) ಧನ, ಧನು – “ಧ” ಕಾರದ ಪದಗಳ ಪ್ರಯೋಗ
(೨) ಲೋಕನ, ಲೋಕದ – ಲೋ ಕಾರದ ಪದಗಳ ಪ್ರಯೋಗ
(೩) ನಾ, ಎನಗೆ – ನಾನು ಶಬಕ್ಕೆ ಪರ್ಯಾಯವಾಗಿ ಉಪಯೋಗಿಸಿರುವ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ