ಪದ್ಯ ೮೫: ಅರಗಿನರಮನೆಯನ್ನು ಕಂಡ ಯಮಸೂನುವಿಗೆ ನಗಲು ಕಾರಣವೇನು?

ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಮನೆಯೆ ತಾನಗ್ನಿಕುಂಡವಿದು
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು (ಆದಿ ಪರ್ವ, ೮ ಸಂಧಿ, ೮೫ ಪದ್ಯ)

ತಾತ್ಪರ್ಯ:
ಅರಗಿನರಮನೆಯನ್ನು ಕಂಡ ಧರ್ಮರಾಯನಿಗೆ, ನಾವು ನಾಲ್ವರು ಈ ಅಗ್ನಿಕುಂಡಕ್ಕೆ (ಈ ಅರಗಿನರಮನೆ) ಸಮಿತ್ತುಗಳು, ಕುಂತಿಯೆ ಆಹುತಿ, ಭೀಮನೆ ಪಶು, ಅರಮನೆಯ ಅಗ್ನಿಕುಂಡ, ಆದರೆ ನನಗೊಂದು ಸಂಶಯ, ಈ ಯಜ್ಞದೀಕ್ಷೆಯನ್ನು ಧೃತರಾಷ್ಟ್ರನೋ ಅಥವ ದುರ್ಯೋಧನನೋ ಕಟ್ಟಿಕೊಂಡಿರುವುದು ಎಂದು ಯೋಚಿಸುತ್ತಾ ನಕ್ಕನು.

ಅರ್ಥ:
ಸಮಿಧೆ: ಹೋಮಕ್ಕೆ ಉಪಯೋಗಿಸುವ ಹತ್ತಿ; ಅಯ್ಯ: ತಂದೆ; ರಮಣಿ: ಹೆಣ್ಣು, ಕನ್ಯೆ; ಆಹುತಿ: ಬಲಿ, ತುತ್ತು; ಪಶು: ಪ್ರಾಣಿ; ಕುಮತಿ: ಕೆಟ್ಟ ಬುದ್ಧಿ; ಅರಮನೆ: ರಾಜರ ವಾಸಸ್ಥಾನ; ಅಗ್ನಿ: ಶಿಖಿ; ಕುಂಡ: ಹೋಮಗಳಿಗೆ ನೆಲದಲ್ಲಿ ಮಾಡಿದ ಕುಣಿ;
ಸಂಶಯ: ಸಂದೇಹ, ಅನುಮಾನ; ದೀಕ್ಷೆ: ನಿಯಮ, ವ್ರತ; ಕ್ರಮ: ನಡೆಯುವಿಕೆ; ಧರಿಸು: ತೊಡು; ನಗು: ಹಾಸ್ಯವನ್ನು ವ್ಯಕ್ತಪಡಿಸುವ ಮುಖಭಾವ; ಸೂನು: ಮಗ; ರಾಜ: ಧರಣೀಪತಿ, ನೃಪ; ಉತ್ತಮ: ಶ್ರೇಷ್ಠ;

ಪದವಿಂಗಡನೆ:
ಸಮಿಧೆಗಳು +ನಾವ್ +ನಾಲ್ವರ್+ಅಯ್ಯನ
ರಮಣಿ+ಆಹುತಿ+ ಭೀಮನೇ +ಪಶು
ಕುಮತಿ+ ಕಟ್ಟಿಸಿದ್+ಅರಮನೆಯೆ+ ತಾನ್+ಅಗ್ನಿ+ಕುಂಡವಿದು
ಎಮಗೆ+ ಸಂಶಯವಿಲ್ಲ+ ರಾಜೋ
ತ್ತಮನೊ+ ದುರ್ಯೋಧನನೊ+ ದೀಕ್ಷಾ
ಕ್ರಮವ +ಧರಿಸಿದನ್+ಆವನೆಂದನು+ ನಗುತ +ಯಮಸೂನು

ಅಚ್ಚರಿ:
(೧) ಕುಂತಿ ಯನ್ನು ವಿವರಿಸಲು – ಅಯ್ಯನ ರಮಣಿ ಎಂದು ವರ್ಣಿಸಿರುವುದು
(೨) ಧೃತರಾಷ್ಟ್ರನನ್ನು ರಾಜೋತ್ತಮ ನೆಂದು ಕರೆದಿರುವುದು
(೩) ತಮ್ಮನ್ನು ಸುಡಲೆಂದೆ ನಿರ್ಮಿಸಿದ ಭವನವೆಂದು ತಿಳಿದ ಬಳಿಕವು ಇದನ್ನು ಕಂಡು ನಗುವ ಧರ್ಮರಾಯನ ಮನ:ಸ್ಥಿತಿಯನ್ನರಿಯಬಹುದು

ನಿಮ್ಮ ಟಿಪ್ಪಣಿ ಬರೆಯಿರಿ