ಪದ್ಯ ೫೮: ಮಗನ ಮಾತು ಕೇಳಿದ ಧೃತರಾಷ್ಟ್ರನು ಏನೆಂದನು?

ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ
ಸಕಲರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ (ಆದಿ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸುಯೋಧನನ ಮಾತು ಕೇಳಿ, ಧೃತರಾಷ್ಟ್ರನು, ಅಯ್ಯೋ ಮಗನೇ, ಧರ್ಮರಾಯನು ನಿನಗೆ ಬಾಧಕನೆ, ಭೀಮಾರ್ಜುನರ ಮನಸ್ಸು ನಿನಗೆ ಕೆಡುಕನ್ನು ಮಾಡಲು ಒಪ್ಪುವುದಿಲ್ಲ, ಅವರು ಎಂದಿಗೂ ಧರ್ಮಜನ ಮಾತನ್ನು ಮೀರರು, ಸಕಲ ರಾಜ್ಯಕ್ಕೆ ಪಾಂಡುವೇ ರಾಜನಾದರು ನನ್ನೊಂದಿಗೆ ಎಂದು ತಪ್ಪಿ ನಡೆಯಲಿಲ್ಲ, ದುಷ್ಟಬುದ್ಧಿಗಳ ಉಪದೇಶವನ್ನು ಕೇಳಬೇಡ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ಅಕಟ: ಅಯ್ಯೊ; ಮಗ: ಸುತ; ಬಾಧಕ: ತೊಂದರೆ, ಕಂಟಕ; ಮತಿ: ಬುದ್ಧಿ; ಕಂಟಕ: ಕೆಡಕು; ಎರಗು: ಬೀಳು; ಮೀರು: ಉಲ್ಲಂಗಿಸು, ವಿರೋಧಿಸು; ನಡೆ: ಸಾಗು, ತೆರಳು; ನಂದನ: ಮಗ; ಸಕಲ: ಎಲ್ಲ; ರಾಜ್ಯ: ದೇಶ; ಪಾಲಕ: ರಾಜ; ವಿಕಳ: ದುರ್ಬುದ್ಧಿ, ದುಷ್ಟ; ಮತಿ: ಬುದ್ಧಿ;

ಪದವಿಂಗಡನೆ:
ಅಕಟ +ಮಗನೇ +ಧರ್ಮಸುತ+ ಬಾ
ಧಕನೆ+ ಭೀಮ+ಅರ್ಜುನರ+ ಮತಿ+ ಕಂ
ಟಕ+ದೊಳ್+ಎರಗದು +ಮೀರಿ +ನಡೆಯರು+ ಧರ್ಮನಂದನನ
ಸಕಲ+ರಾಜ್ಯಕೆ+ ಪಾಂಡುವೇ +ಪಾ
ಲಕನು+ ತನ್ನೊಳು+ ತಪ್ಪಿದನೆ+ ಬಿಡು
ವಿಕಳ+ಮತಿಗಳ+ ಮಾತನ್+ಎಂದನು +ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ಮಗ, ಸುತ, ನಂದನ; ಕಂಟಕ, ಬಾಧಕ; – ಸಮಾನಾರ್ಥಕ ಪದಗಳು
(೨) ಮಗ: ೧, ೬ ಸಾಲಿನಲ್ಲಿ ಕಾಣುವ ಪದಗಳು; ಮತಿ: ೨, ೬ ಸಾಲಿನಲ್ಲಿ ಕಾಣುವ ಪದಗಳು
(೩) ಜೋಡಿ ಪದಗಳು: ಪಾಂಡುವೇ ಪಾಲಕನು; ತನ್ನೊಳು ತಪ್ಪಿದನೆ

ನಿಮ್ಮ ಟಿಪ್ಪಣಿ ಬರೆಯಿರಿ